ಪ್ರಜಾವಾಣಿ ಸಂಗತ – ಎಲ್ಲ ವೈದ್ಯರೂ ಕಳ್ಳರಲ್ಲ

ಎಲ್ಲ ವೈದ್ಯರೂ ಕಳ್ಳರಲ್ಲ

ಪ್ರಜಾವಾಣಿ, ನವೆಂಬರ್ 13, 2017 ಇಲ್ಲಿದೆ: https://www.prajavani.net/news/article/2017/11/13/532626.html

ರಾಜ್ಯದ ಖಾಸಗಿ ವೈದ್ಯರನ್ನು ಮಣಿಸಲು ಕೆಪಿಎಂಇ ಕಾಯಿದೆಗೆ ತಿದ್ದುಪಡಿ ಮಾಡಲು ಸರಕಾರವು ಮುಂದಾಗಿದೆ. ವೈದ್ಯರು ಯಾವುದೇ ನಿಯಂತ್ರಣಕ್ಕೊಳಪಡಲು ಸಿದ್ಧರಿಲ್ಲ, ಅವರ ಕುಕೃತ್ಯಗಳನ್ನು ಶಿಕ್ಷಿಸುವುದಕ್ಕೆ ಈಗ ಯಾವ ವ್ಯವಸ್ಥೆಯೂ ಇಲ್ಲ, ವೈದ್ಯರ ಧನದಾಹವು ಮಿತಿಮೀರಿದ್ದು ಅದನ್ನು ಸರಕಾರವು ನಿರ್ಬಂಧಿಸಲೇ ಬೇಕು, ಆದ್ದರಿಂದ ಇಂತಹಾ ಕಾನೂನು ಅತ್ಯಗತ್ಯ ಎನ್ನುವುದು ಕೆಪಿಎಂಇ ಕಾಯಿದೆಗೆ ತಿದ್ದುಪಡಿ ಬೇಕು ಎನ್ನುವವರ ವಾದಗಳಾಗಿವೆ. ಆದರೆ, ವಾಸ್ತವದಲ್ಲಿ, ಸರಕಾರದ ನಿರ್ಲಕ್ಷ್ಯದಿಂದ ಸಾರ್ವಜನಿಕ ಆರೋಗ್ಯ ಸೇವೆಗಳು ನೆಲ ಕಚ್ಚಿದ್ದು, ಶೇ. 80ರಷ್ಟು ಜನರು ಖಾಸಗಿ ಆರೋಗ್ಯ ಸೇವೆಗಳಿಗೆ ಖರ್ಚು ಮಾಡಬೇಕಾದ ಕಷ್ಟಕ್ಕೆ ಸಿಲುಕಿರುವಾಗ, ಅದನ್ನೆಲ್ಲ ಮರೆಮಾಚಲು ಚುನಾವಣೆಯ ವೇಳೆ ಈ ತಿದ್ದುಪಡಿಗಳ ಆಮಿಷವನ್ನು ಒಡ್ಡಲಾಗುತ್ತಿದೆ.
ನವೆಂಬರ್ ಏಳರಂದು ಆರೋಗ್ಯ ಸಚಿವರು ನೀಡಿರುವ ಹೇಳಿಕೆಯಲ್ಲಿ, ಗ್ರಾಹಕರ ವೇದಿಕೆಗಳು ದೂರುಗಳನ್ನು ಪರಿಹರಿಸಲು ದೀರ್ಘ ಸಮಯವನ್ನು ತೆಗೆದುಕೊಳ್ಳುವುದರಿಂದ, ವೈದ್ಯರನ್ನು 45 ದಿನಗಳೊಳಗೆ ಕ್ಷಿಪ್ರ ವಿಚಾರಣೆಗೆ ಒಳಪಡಿಸುವುದಕ್ಕಾಗಿ ಜಿಲ್ಲಾ ಮಟ್ಟದ ಕುಂದುಕೊರತೆಗಳ ಸಮಿತಿಗಳನ್ನು ರಚಿಸಲು ಈ ತಿದ್ದುಪಡಿಗಳನ್ನು ತರಲಾಗುತ್ತಿದೆ ಎಂದಿದ್ದಾರೆ.

ತೀರಾ ನಿರಾಧಾರವಾದ ಈ ಒಂದೇ ಹೇಳಿಕೆಯು ಸಾಂವಿಧಾನಿಕ ವ್ಯವಸ್ಥೆಯನ್ನು ಅಪಮಾನಿಸಿ, ಬುಡಮೇಲು ಮಾಡುವ ದುರುದ್ದೇಶವನ್ನು ಎತ್ತಿ ತೋರಿಸುತ್ತದೆ. ರಾಜ್ಯದ ವೈದ್ಯರು ಇಂತಹಾ ದುರುದ್ದೇಶದ ವಿರುದ್ದವೇ ಪ್ರತಿಭಟನೆಗೆ ಇಳಿದಿದ್ದಾರೆ.

ಕೆಪಿಎಂಇ ತಿದ್ದುಪಡಿಗೆಂದು ಇದೇ ಸರಕಾರವು ನೇಮಿಸಿದ್ದ ನ್ಯಾ. ವಿಕ್ರಂಜಿತ್ ಸೆನ್ ಸಮಿತಿಯು ಗ್ರಾಹಕರ ವೇದಿಕೆಗಳಲ್ಲಿ ಪರಿಹಾರ ಪಡೆಯುವ ಅವಕಾಶಗಳು ಇರುವ ಕಾರಣಕ್ಕೇ ಜಿಲ್ಲಾ ಸಮಿತಿಯ ಅಗತ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿತ್ತು. ವೈದ್ಯರನ್ನು ನಿಯಂತ್ರಿಸಲು ವೃತ್ತಿಸಂಹಿತೆ, ವೈದ್ಯಕೀಯ ಪರಿಷತ್ತಿನ ನಿಯಮಗಳು, ಗ್ರಾಹಕರ ರಕ್ಷಣಾ ಕಾಯಿದೆ, 2007ರ ಕೆಪಿಎಂಇ ಕಾಯಿದೆ, ವೈದ್ಯ ವೃತ್ತಿಗೆ ಸಂಬಂಧಿಸಿದ ಹಾಗೂ ಇನ್ನೂ ಹಲವು ಕಾನೂನುಗಳು ಇರುವುದರಿಂದ ಹೊಸ ಸಮಿತಿಯ ಅಗತ್ಯವಿಲ್ಲ ಎನ್ನುವುದು ಕಾನೂನು ತಜ್ಞರ ಅಭಿಮತವೂ ಆಗಿತ್ತು. ಅವೆಲ್ಲ ಏನಾದವು?

ಗ್ರಾಹಕರ ವೇದಿಕೆಗಳ ಬಗ್ಗೆ ಹೇಳಿರುವುದೂ ಸುಳ್ಳು. ಈ ಮೇ 31 ರವರೆಗೆ 31 ಜಿಲ್ಲಾ ಗ್ರಾಹಕ ವೇದಿಕೆಗಳಲ್ಲಿ ಶೇ. 95ರಷ್ಟು, ಹಾಗೂ ರಾಜ್ಯ ಆಯೋಗದಲ್ಲಿ ಶೇ. 84ರಷ್ಟು ಪ್ರಕರಣಗಳು ಈಗಾಗಲೇ ಪರಿಹರಿಸಲ್ಪಟ್ಟಿವೆ. ಸರಾಸರಿ ಶೇ. 10-12ರಷ್ಟು ವೈದ್ಯಕೀಯ ನಿರ್ಲಕ್ಷ್ಯದ ದೂರುಗಳಾಗಿದ್ದು, 23.5 ಲಕ್ಷ ರೂ ಪರಿಹಾರವನ್ನು ನೀಡಿದ ನಿದರ್ಶನವೂ ಇದೆ. ಆಯೋಗಕ್ಕೆ ಬಸವ ಭವನದ ಮೂಲೆಯಲ್ಲಿ ಈ ಸರಕಾರ ಒದಗಿಸಿರುವ ಸಣ್ಣ ಕೊಠಡಿಯ ಇಕ್ಕಟ್ಟಿನಲ್ಲೂ 3 ಸದಸ್ಯರು ತಿಂಗಳಿಗೆ 200 ಪ್ರಕರಣಗಳನ್ನು ಪರಿಹರಿಸುತ್ತಿದ್ದಾರೆ. ವೈದ್ಯರ ಕತ್ತು ಹಿಸುಕುವ ಕಾನೂನು ತರಲೆಂದು ಆಯೋಗವನ್ನು ಅವಮಾನಿಸುವ ಬದಲು ದೊಡ್ಡ ಕೊಠಡಿಯನ್ನು ನೀಡಿದರಾಗದೇ?

ರಾಜ್ಯ ವೈದ್ಯಕೀಯ ಪರಿಷತ್ತಿಗೆ ಕಳೆದ 5 ವರ್ಷಗಳಲ್ಲಿ 329 ದೂರುಗಳು ಬಂದಿದ್ದು, 33 ವೈದ್ಯರ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಪರಿಷತ್ತು ಸರಿಯಿಲ್ಲ ಎಂದು ಹೇಳಿ ಹೊಸ ಸಮಿತಿಯನ್ನು ತರಹೊರಟಿರುವ ಸರಕಾರವು ಇದೇ ಪರಿಷತ್ತಿಗೆ 2016ರಲ್ಲಿ ನಡೆಸಬೇಕಾಗಿದ್ದ ಚುನಾವಣೆಯನ್ನು ಇನ್ನೂ ನಡೆಸಿಲ್ಲ!

ಈಗಿರುವ 2007ರ ಕೆಪಿಎಂಇ ಕಾಯಿದೆಯಡಿಯಲ್ಲೂ ತಪ್ಪಿತಸ್ಥ ಆಸ್ಪತ್ರೆಗಳ ಮೇಲೆ ಕ್ರಮ ಕೈಗೊಳ್ಳಬಹುದು, ಅಂತಹಾ ನಿದರ್ಶನಗಳೂ ಇವೆ. ಕಲಬುರಗಿಯಲ್ಲಿ ಹಲವರ ಗರ್ಭಕೋಶಗಳನ್ನು ತೆಗೆದ ಪ್ರಕರಣಗಳಲ್ಲಿ ಈ ಕಾನೂನಿನಡಿಯಲ್ಲೇ ಆಸ್ಪತ್ರೆಗಳ ಪರವಾನಿಗೆಯನ್ನು ಕೂಡಲೇ ರದ್ದು ಪಡಿಸಲಾಗಿತ್ತು, ಒಂದು ಆಸ್ಪತ್ರೆಯು ಹೆಸರು ಬದಲಿಸಿ ಮತ್ತೆ ತೆರೆದರೂ, ಈಗದನ್ನು ಮುಚ್ಚಿಸಲಾಗಿದೆ. ಜಿಲ್ಲಾಡಳಿತ, ವೈದ್ಯಕೀಯ ಪರಿಷತ್ತು ಹಾಗೂ ನ್ಯಾಯಾಲಯಗಳಲ್ಲಿ ಈ ಪ್ರಕರಣಗಳ ವಿಚಾರಣೆಯು ನಡೆಯುತ್ತಿದೆ.

ಆದರೆ ಇವು ಯಾವುವೂ ಸರಿಯಿಲ್ಲವೆಂದು ಸುಳ್ಳು ಹೇಳಿ, ಅಪರ ಯಾ ವಿಶೇಷ ಜಿಲ್ಲಾಧಿಕಾರಿಗಳು ಮುಖ್ಯಸ್ಥರಾಗಿರುವ ಸಮಿತಿಗಳಲ್ಲಿ ವಕೀಲರ ನೆರವೂ ಇಲ್ಲದೆ ಕ್ಷಿಪ್ರ ವಿಚಾರಣೆಗೆ ವೈದ್ಯರನ್ನು ಗುರಿಪಡಿಸಬೇಕು ಎನ್ನುವ ಅಸಾಂವಿಧಾನಿಕವಾದ, ಅಪಾಯಕಾರಿಯಾದ ತಿದ್ದುಪಡಿಗೆ ಹೊರಟಿರುವುದೇ ನಮ್ಮ ವಿರೋಧಕ್ಕೆ ಪ್ರಮುಖ ಕಾರಣವಾಗಿದೆ.

ಹೆಣವಿಟ್ಟು ಹಣಕ್ಕಾಗಿ ಪೀಡಿಸುತ್ತಾರೆ ಎನ್ನುವ ಆರೋಪವನ್ನು ಪ್ರತಿನಿತ್ಯವೂ ಮಾಡಲಾಗುತ್ತಿದೆ. 2015ರಲ್ಲಿ ರಾಜ್ಯದಲ್ಲಾದ 393731 ಸಾವುಗಳಲ್ಲಿ 146414 ಸಾವುಗಳು 1692 ಆಸ್ಪತ್ರೆಗಳಲ್ಲಾಗಿವೆ. ಬಾಯಿಗೆ ಬಂದಂತೆ ಆರೋಪಿಸುವ ಬದಲು, ಇವುಗಳಲ್ಲಿ ಅದೆಷ್ಟು ಪ್ರಕರಣಗಳಲ್ಲಿ ಹಣಕ್ಕಾಗಿ ಪೀಡಿಸಲಾಗಿತ್ತೆನ್ನುವುದನ್ನು ಹೇಳಲಿ. ಅಪರೂಪಕ್ಕೊಮ್ಮೆ, ಯಾವುದೋ ಕಾರಣಗಳಿಗೆ ನಡೆದಿರಬಹುದಾದ ಕೆಲವು ಪ್ರಕರಣಗಳನ್ನೇ ದೊಡ್ಡದು ಮಾಡಿ, ಎಲ್ಲಾ ವೈದ್ಯರೂ ಹೆಣವಿಟ್ಟು ಹಣ ಕೀಳುವವರೆಂದು ಆರೋಪಿಸುವುದು ವೈದ್ಯವಿರೋಧಿ ಹುಚ್ಚಾಟವಾಗಿದೆ.

ನಮ್ಮ ದೇಶದಲ್ಲಿ ವೈದ್ಯಕೀಯ ಚಿಕಿತ್ಸೆಗೆ ತಗಲುವ ವೆಚ್ಚಗಳ ಬಗ್ಗೆ ಸ್ಪಷ್ಟ ಮಾಹಿತಿಯೇ ಲಭ್ಯವಿಲ್ಲದಿರುವಾಗ ಸರಕಾರವು ದರವನ್ನು ನಿಗದಿಪಡಿಸುತ್ತದೆನ್ನುವುದು ಹುಂಬತನ. ಕೇಂದ್ರ ಸರಕಾರದ ಅಂತಹಾ ಪ್ರಯತ್ನವು 5 ವರ್ಷಗಳಾದರೂ ಕೈಗೂಡಿಲ್ಲ. ಕರ್ನಾಟಕ ಜ್ಞಾನ ಆಯೋಗದ ವರದಿಯಂತೆ, ಆರೋಗ್ಯ ಸುರಕ್ಷಾ ಯೋಜನೆಗಳಲ್ಲಿ ನೀಡಲಾಗುತ್ತಿರುವ ದರಗಳು, ಆಸ್ಪತ್ರೆಗಳು ಮಾಡುವ ಖರ್ಚಿನ ಶೇ. 7-70 ರಷ್ಟನ್ನು ಮಾತ್ರ ಭರಿಸುತ್ತವೆ; ಅಂದರೆ ಉಳಿದ ಖರ್ಚಿನ ನಷ್ಟವನ್ನು ಖಾಸಗಿ ಆಸ್ಪತ್ರೆಗಳೇ ಸಹಿಸುತ್ತವೆ. ಆದ್ದರಿಂದ, ಜನರಿಗೆ ಅತಿ ಕಡಿಮೆ ದರದಲ್ಲಿ ಅತ್ಯುತ್ತಮ ಚಿಕಿತ್ಸೆಯು ದೊರೆಯಬೇಕಾದರೆ, ಸರಕಾರಿ ಆಸ್ಪತ್ರೆಗಳು ಸುಸಜ್ಜಿತಗೊಳ್ಳಬೇಕೇ ಹೊರತು, ಖಾಸಗಿ ವೈದ್ಯರ ಕತ್ತು ಹಿಸುಕಿದರಾಗದು. ಕಾರ್ಪರೇಟ್ ಆಸ್ಪತ್ರೆಗಳಲ್ಲಾಗಲೀ, ಇನ್ಯಾವುದೇ ಆಸ್ಪತ್ರೆಗಳಲ್ಲಾಗಲೀ ದುಬಾರಿ ಚಿಕಿತ್ಸೆಯ ಬಗ್ಗೆ ನಿರ್ದಿಷ್ಟ ದೂರುಗಳಿದ್ದರೆ, ಸಂಬಂಧಿತ ಕಾನೂನುಗಳಡಿಯಲ್ಲಿ ತನಿಖೆಗೊಳಪಡಿಸಬೇಕೇ ಹೊರತು ಎಲ್ಲಾ ವೈದ್ಯರನ್ನೂ ದೂಷಿಸುವುದಲ್ಲ.

ಕೋಟಿ ಕೊಟ್ಟವರು ಲೂಟಿ ಮಾಡುತ್ತಿದ್ದಾರೆ ಎನ್ನುವವರು ನೀಟ್ ಬಂದ ಮೇಲೂ ಕೋಟಿಗೆ ಸೀಟು ಕೊಡಲು ಅವಕಾಶವಿತ್ತಿರುವ ಈ ಸರಕಾರವನ್ನು ಪ್ರಶ್ನಿಸುವುದಿಲ್ಲ, ಬದಲಿಗೆ ವೈದ್ಯರೇ ಪ್ರಶ್ನಿಸಿದ್ದಾರೆ. ಈ ಅಸಾಂವಿಧಾನಿಕ ತಿದ್ದುಪಡಿಗಳನ್ನು ಪ್ರತಿಭಟಿಸುತ್ತಿರುವ ಬಹುತೇಕ ವೈದ್ಯರು ಸ್ವಸಾಮರ್ಥ್ಯದಿಂದ ವೈದ್ಯರಾಗಿ ಹಗಲಿರುಳು ದುಡಿಯುತ್ತಿರುವವರೇ ಹೊರತು, ಕೋಟಿ ಕೊಟ್ಟು ಸೀಟು ಪಡೆದವರಲ್ಲ.

‘ಮಂಥರೆ ಹಟ’ದಿಂದ ಲಾಭವೇ ಆಗಿದೆ!

ಪ್ರಜಾವಾಣಿ, ನವೆಂಬರ್ 29, 2017 ಇಲ್ಲಿದೆ: https://www.prajavani.net/news/article/2017/11/28/536433.html

ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಿಸುವ ಕೆಪಿಎಂಇ 2017 ಮಸೂದೆಯನ್ನು ವಿಧಾನ ಮಂಡಲ ಅನುಮೋದಿಸಿದೆ. ಎಪ್ರಿಲ್ 28ರಂದು ನ್ಯಾ. ವಿಕ್ರಂಜಿತ್ ಸೆನ್ ಸಮಿತಿ ಮಾಡಿದ್ದ ಯಾವ ಶಿಫಾರಸುಗಳನ್ನು ಆರೋಗ್ಯ ಸಚಿವರು ಕಡೆಗಣಿಸಿದ್ದರೋ, ಅವುಗಳಲ್ಲಿ ಸರಕಾರಿ ಆಸ್ಪತ್ರೆಗಳನ್ನು ಕಾಯಿದೆಯಡಿ ತರಬೇಕೆಂಬುದನ್ನುಳಿದು ಇತರೆಲ್ಲಾ ಶಿಫಾರಸುಗಳು ಕೊನೆಗೂ ಮನ್ನಣೆ ಪಡೆದಿವೆ. ಇದನ್ನು ಸಾಧಿಸಲು ಜೂನ್ 16ಕ್ಕೆ ರಾಜ್ಯದ 12 ಸಾವಿರ ವೈದ್ಯರಿಂದ ಬೆಂಗಳೂರು ಚಲೋ, ನವೆಂಬರ್ 3ರಂದು ರಾಜ್ಯವ್ಯಾಪಿ ಮುಷ್ಕರ, ನವೆಂಬರ್ 13ಕ್ಕೆ 30 ಸಾವಿರಕ್ಕೂ ಹೆಚ್ಚು ವೈದ್ಯರಿಂದ ಬೆಳಗಾವಿ ಚಲೋ, ನಂತರ ಸರದಿ ಉಪವಾಸ ಹಾಗೂ ಹಲವು ಜಿಲ್ಲೆಗಳಲ್ಲಿ ವೃತ್ತಿಸ್ಥಗಿತ ಎಲ್ಲವನ್ನೂ ಮಾಡಬೇಕಾಯಿತು. ಎಪ್ರಿಲ್ 28ರಂದು ನ್ಯಾ. ಸೆನ್, ಆರೋಗ್ಯ ಸಚಿವರು ಹಾಗೂ ಇಲಾಖೆಯ ಮುಖ್ಯ ಕಾರ್ಯದರ್ಶಿಯವರು ಒಟ್ಟಿಗೇ ಮಾಡಿದ್ದ ಘೋಷಣೆಗಳನ್ನು ಪಾಲಿಸಿದ್ದರೆ ಈ ಸತ್ಯಾಗ್ರಹಗಳ ಅಗತ್ಯವೇ ಇರಲಿಲ್ಲ.

ಈ ಮಸೂದೆಯ ಬಗ್ಗೆ ಸಾಕಷ್ಟು ಚರ್ಚೆಯೂ ಆಯಿತು; ಜೂನ್ 16ರಿಂದ ಜೋರಾಗಿ, ನವೆಂಬರ್ 3ರ ಬಳಿಕ ತಾರಕಕ್ಕೇರಿತು. ಮಸೂದೆಯನ್ನು ವಿರೋಧಿಸಿ ಪ್ರತಿಭಟಿಸಿದವರಲ್ಲಿ ತಮ್ಮಷ್ಟಕ್ಕೇ ವೃತ್ತಿನಿರತರಾಗಿರುವ ವೈದ್ಯರೇ ತುಂಬಿದ್ದರು, ಕೋಟಿಗಟ್ಟಲೆ ತೊಡಗಿಸಿದ ಕಾರ್ಪರೇಟ್ ಆಸ್ಪತ್ರೆಗಳವರೂ ಅಲ್ಪಸಂಖ್ಯೆಯಲ್ಲಿದ್ದರು. ಮಸೂದೆಯ ಪರವಾಗಿಯೂ ಹಲತರದ ಅಭಿಪ್ರಾಯಗಳುಳ್ಳವರಿದ್ದರು: ಖಾಸಗಿ ವೈದ್ಯರೆಲ್ಲರೂ ಒಂದೇ ಲಾಬಿಯವರು, ಅವರೆಲ್ಲರನ್ನೂ ಒಂದೇ ರೀತಿ ಕಟ್ಟಿಹಾಕಬೇಕು ಎಂದು ಕೆಲವು ಚಳುವಳಿಗಾರರು ವಾದಿಸುತ್ತಿದ್ದರೆ, ಬಹುತೇಕ ವೈದ್ಯರು ಒಳ್ಳೆಯವರು, ಆದರೆ ಕೆಟ್ಟವರನ್ನು ಸರಕಾರವು ನಿಯಂತ್ರಿಸಲೇಬೇಕು ಎಂದು ಇನ್ನು ಹಲವರು ಕೇಳುತ್ತಿದ್ದರು, ಈ ಕಾನೂನು ಬಂದರೆ ಆರೋಗ್ಯ ಸೇವೆಗಳು ತುಸು ಅಗ್ಗವಾಗಬಹುದೆಂದು ಆಸೆ ಹೊತ್ತ ಜನಸಾಮಾನ್ಯರೂ ಇದ್ದರು. ಹೀಗೆ ಈ ಎರಡೂ ಕಡೆಗಳಲ್ಲಿ ಬಗೆಬಗೆಯ ಅಭಿಪ್ರಾಯಗಳಿದ್ದವು, ಪರ-ವಿರೋಧಗಳಿಗೆ ಬೇರೆ ಬೇರೆ ಕಾರಣಗಳಿದ್ದವು.

ಆದರೆ ಇದು ಅಥವಾ ಅದು, ನಡುವೆ ಬೇರೇನಿಲ್ಲ ಎಂಬ ಮನಸ್ಥಿತಿಯೇ ಬಲಗೊಳ್ಳುತ್ತಿರುವ ಇಂದಿನ ಸನ್ನಿವೇಶದಲ್ಲಿ, ಅತಿ ಸಂಕೀರ್ಣವಾದ ವೈದ್ಯವೃತ್ತಿಯ ಬಗೆಗಿನ ಚರ್ಚೆಯೂ ಅದು ಅಥವಾ ಇದು ಎಂಬಲ್ಲಿಗೆ ಬಂತು. ತಮ್ಮ ವೃತ್ತಿಸ್ವಾತಂತ್ರ್ಯದ ರಕ್ಷಣೆಗಾಗಿ ಈ ತಿದ್ದುಪಡಿಗಳ ವಿರುದ್ಧ ಸೆಟೆದೆದ್ದ ವೈದ್ಯರೆಲ್ಲರನ್ನೂ ಕಾರ್ಪರೇಟ್ ದಲ್ಲಾಳಿಗಳೆಂದೂ, ಧನದಾಹಿಗಳೆಂದೂ, ರಕ್ತ ಹೀರುವವರೆಂದೂ ಜರೆಯಲಾಯಿತು. ಅಲ್ಲಿಲ್ಲಿ ನಡೆದ ಪ್ರಕರಣಗಳನ್ನೇ ಹಿಗ್ಗಿಸಿ, ಸುಳ್ಳುಗಳನ್ನೂ, ಅರ್ಧ ಸತ್ಯಗಳನ್ನೂ ಬೆರೆಸಿ ಆರೋಪಗಳ ಸುರಿಮಳೆಗೈಯುತ್ತಿದ್ದ ಕೆಲವರು ತಾವಷ್ಟೇ ಆರು ಕೋಟಿ ಕನ್ನಡಿಗರ ಹಿತರಕ್ಷಕರು ಎಂದು ಹಠ ಹಿಡಿದರು. ತಮಗೆ ಗೊತ್ತಿರುವುದೇ ಪರಮ ಸತ್ಯ, ಅದನ್ನೊಪ್ಪದವರೆಲ್ಲರೂ ದ್ರೋಹಿಗಳು ಎಂದು ನೇರವಾಗಿ ವ್ಯಕ್ತಿನಿಂದನೆಗೇ ಇಳಿಯುವ ಭೀಕರ ರೋಗವು ಕೆಪಿಎಂಇ ಚರ್ಚೆಯೊಳಗೂ ವ್ಯಾಪಿಸಿತು.

ಈ ಕೆಪಿಎಂಇ ಚರ್ಚೆ ಮೂರು ತಿಂಗಳಿನದಲ್ಲ, ಜುಲೈ 2016ರ ಕೊನೆಗೆ ನ್ಯಾ. ವಿಕ್ರಂಜಿತ್ ಸೆನ್ ಅಧ್ಯಕ್ಷತೆಯಲ್ಲಿ ಅದಕ್ಕಾಗಿ ಸಮಿತಿಯೊಂದನ್ನು ರಚಿಸಿದಾಗಲೇ ಅದು ಆರಂಭವಾಗಿತ್ತು. ರಾಜ್ಯದ ಎಲ್ಲಾ ವೈದ್ಯರು ಬರೆಯುವ ಎಲ್ಲಾ (ದಿನಕ್ಕೆ ಲಕ್ಷಗಟ್ಟಲೆ) ಚೀಟಿಗಳನ್ನು ಔಷಧ ನಿಯಂತ್ರಕರಿಂದ ತನಿಖೆಗೊಳಪಡಿಸಬೇಕು, ಹೆಚ್ಚು ಬರೆದವರನ್ನು ದಂಡ ಸಂಹಿತೆಯ 420ನೇ ಪ್ರಕರಣದಡಿ ಶಿಕ್ಷಿಸಬೇಕು ಎಂಬ ಅತಿ ಬಾಲಿಶ, ನ್ಯಾಯಬಾಹಿರ ಬೇಡಿಕೆಯು ಮೊದಲ ಸಭೆಯಲ್ಲಿ ಪ್ರಸ್ತಾಪಿಸಲ್ಪಟ್ಟಾಗಲೇ ಈ ತಿದ್ದುಪಡಿಗಳ ಗತಿಯೇನಾಗಲಿದೆ ಎನ್ನುವುದು ವೈದ್ಯರಾದ ನಮಗೆ ತಿಳಿದುಹೋಗಿತ್ತು. ಆದ್ದರಿಂದಲೇ ನಮ್ಮೆಲ್ಲ ಅಹವಾಲುಗಳನ್ನು ಸವಿವರವಾಗಿ, ಸಾಧಾರವಾಗಿ ಬರೆದೇ ಕೊಟ್ಟಿದ್ದೆವು. ಆಧಾರರಹಿತ ಆರೋಪಗಳ ಮೂಲಕ ಸಮಿತಿಯನ್ನು ತಪ್ಪು ದಾರಿಗೆಳೆಯಲು ನಡೆಸಿದ ಪ್ರಯತ್ನಗಳನ್ನು ಅಲ್ಲಿಂದಲ್ಲಿಗೇ ಎತ್ತಿ ತೋರಿಸಿದ್ದೆವು. ಸಾರ್ವಜನಿಕ ಆರೋಗ್ಯದ ಬಗ್ಗೆ ಅಧ್ಯಯನ ನಡೆಸಿದ್ದೇವೆ ಎಂದವರ ಅಧ್ಯಯನಗಳ ಮಟ್ಟವೇನು ಎನ್ನುವುದನ್ನೂ ಸಾಬೀತು ಪಡಿಸಿದ್ದೆವು. ಕೇಂದ್ರ ಸರಕಾರದ ವೈದ್ಯಕೀಯ ಸಂಸ್ಥೆಗಳ ಕಾಯಿದೆಯನ್ನು, ಅದನ್ನು ಅನುಸರಿಸಿರುವ ಕೇರಳವೂ ಸೇರಿದಂತೆ ಇತರ 11 ರಾಜ್ಯಗಳ ಮಾದರಿಯನ್ನು ಇಲ್ಲೂ ಅನುಸರಿಸುವಂತೆ ನಾವು ಮಾಡಿದ ಮನವಿಗಳನ್ನು ಪರಿಗಣಿಸದೆ, ಪಶ್ಚಿಮ ಬಂಗಾಳದ ವೈದ್ಯ ವಿರೋಧಿ ಕಾಯಿದೆಯನ್ನು ಮುಂದಿಟ್ಟಾಗ ಬಲವಾಗಿ ವಿರೋಧಿಸಿದ್ದೆವು.

ನಮ್ಮ ಸಂವಿಧಾನ, ವಿವಿಧ ಕಾನೂನುಗಳು, ನಮ್ಮ ವೃತ್ತಿ ಸಂಹಿತೆ ಹಾಗೂ ನಿಯಮಗಳು, ಸರ್ವೋಚ್ಚ ನ್ಯಾಯಾಲಯದ ಹಲವು ತೀರ್ಪುಗಳು ಇತ್ಯಾದಿಯಾಗಿ ನಾವು ಮಂಡಿಸಿದ ಆಧಾರಗಳನ್ನು ಯಾರೊಬ್ಬರೂ ಪ್ರಶ್ನಿಸಲಿಲ್ಲ, ವಿರೋಧಿಸಲೂ ಇಲ್ಲ. ತಿದ್ದುಪಡಿಗಳ ಪರವಹಿಸಿದವರು ಭಾವನಾತ್ಮಕವಾಗಿ ವಾದಿಸಿದರೇ ಹೊರತು, ಅವಕ್ಕೆ ಸೂಕ್ತ ಆಧಾರಗಳನ್ನು ಒದಗಿಸಲಿಲ್ಲ. ವೈದ್ಯವಿರೋಧಿ ತಿದ್ದುಪಡಿಗಳು ಜನಪರ ಹೇಗಾಗುತ್ತವೆ, ಮಸೂದೆಯು ಜನಪರ ಎಂದಾದರೆ ನ್ಯಾ. ಸೆನ್ ಸಮಿತಿಯ ವರದಿಯು ಜನವಿರೋಧಿಯಾಗಿತ್ತೇ ಎಂಬ ಪ್ರಶ್ನೆಗಳಿಗೂ ಉತ್ತರ ದೊರೆಯಲಿಲ್ಲ. ಕಾನೂನು ರಚನೆಯ ಪ್ರಕ್ರಿಯೆಯು ವಸ್ತುನಿಷ್ಠವಾಗಿರಬೇಕು, ಸಂವಿಧಾನಬದ್ಧವಾಗಿರಬೇಕು, ಜನರಿಗಷ್ಟೇ ಅಲ್ಲ, ಅತ್ಯಂತ ಕ್ಲಿಷ್ತಕರವಾದ ವೃತ್ತಿಯಲ್ಲಿರುವ ವೈದ್ಯರಿಗೂ ನ್ಯಾಯವೊದಗಬೇಕು ಎಂಬ ಮೂಲಭೂತ ಆಶಯಗಳೆಲ್ಲ ಬದಿಗೆ ಸರಿದು, ಬೀದಿ ರಂಪದಿಂದಲೇ ಕಾನೂನನ್ನು ಹೇರಬಹುದೆನ್ನುವ ಪ್ರವೃತ್ತಿಯು ಮೊದಲಿಂದ ಕೊನೆಯವರೆಗೆ ನಿಚ್ಚಳವಾಗಿ ಕಂಡು ಬಂತು.
ರಾಜ್ಯದ 40000ದಷ್ಟು ವೈದ್ಯರು ಪ್ರತಿಭಟನೆಗಳಲ್ಲಿ ನೇರವಾಗಿ ಭಾಗಿಯಾದುದು ಹಾಗೂ ಇನ್ನುಳಿದವರು ವೃತ್ತಿಯಿಂದ ದೂರವುಳಿದುದು ವೈದ್ಯರಲ್ಲಿದ್ದ ಆತಂಕವನ್ನು ಎತ್ತಿ ತೋರಿಸಿತು. ಪಕ್ಷಬೇಧವಿಲ್ಲದೆ ಹೆಚ್ಚಿನ ನಾಯಕರೂ ವೈದ್ಯರ ಬೇಡಿಕೆಗಳಿಗೆ ಸಹಾನುಭೂತಿ ವ್ಯಕ್ತಪಡಿಸಿದರು. ಹೆಚ್ಚಿನ ಪತ್ರಿಕೆಗಳೂ, ಟಿವಿ ವಾಹಿನಿಗಳೂ ಸರಕಾರದ ನಿಲುವನ್ನು ಪ್ರಶ್ನಿಸಿದವು. ಸರಕಾರಿ ಆಸ್ಪತ್ರೆಗಳನ್ನು ಕಾಯಿದೆಯಡಿ ತರಬೇಕೆನ್ನುವ ನಮ್ಮ ಬೇಡಿಕೆಗೂ ವ್ಯಾಪಕ ಬೆಂಬಲ ದೊರೆಯಿತು; ತನ್ನ ಮನೆಯನ್ನೇ ಸರಿಯಾಗಿಡದ ಸರಕಾರವು ಖಾಸಗಿ ವೈದ್ಯರನ್ನು ನಿಯಂತ್ರಿಸುವುದರ ಔಚಿತ್ಯವನ್ನು ಹಲವರು ಪ್ರಶ್ನಿಸಿದರು. ಇವನ್ನೆಲ್ಲ ಪರಿಗಣಿಸಿ, ಮಾನ್ಯ ಮುಖ್ಯಮಂತ್ರಿಗಳು ಮುತುವರ್ಜಿ ವಹಿಸಿ, ಜನರಿಗೂ ನ್ಯಾಯವೊದಗುವ, ವೈದ್ಯರಿಗೂ ಅನ್ಯಾಯವಾಗದ ಮಸೂದೆಯನ್ನು ಅನುಮೋದಿಸಲಾಯಿತು. ಇದನ್ನು ಖಾಸಗಿ ಹಿತಾಸಕ್ತಿಗಳಿಗೆ ಶರಣಾಗತಿ ಎನ್ನುವುದು ಆತ್ಮವಂಚನೆ ಅಷ್ಟೇ.

ಅನೇಕರು ಮಂಥರೆ ತರಹ ಹುಳಿ ಹಿಂಡಿದ್ದಾರೆ ಎಂದು ಮಾನ್ಯ ಆರೋಗ್ಯ ಸಚಿವರು ಹೇಳಿದ್ದಾರೆ. ನಾವು ವೈದ್ಯರೇ ಮಂಥರೆಯರು ಎಂದಾದರೆ ಹೆಮ್ಮೆಯಿಂದಲೇ ಅದನ್ನು ಒಪ್ಪಿಕೊಳ್ಳುತ್ತೇವೆ. ಮಂಥರೆಯ ಹಠದಿಂದ ದಶರಥನ ಮಾತು ಉಳಿಯಿತು, ಜೀವವುಳಿಸಿದ ಕೈಕೇಯಿಗೆ ಅನ್ಯಾಯವಾಗುವುದು ತಪ್ಪಿತು, ಭರತನಿಗೆ ಅಧಿಕಾರವೂ ಸಿಕ್ಕಿತು. ನಮ್ಮ ಪ್ರತಿಭಟನೆಯಿಂದಲೂ ಆಡಳಿತದ ಮಾತು ಉಳಿಯಿತು, ನ್ಯಾ. ಸೆನ್ ವರದಿ ಜಾರಿಯಾಯಿತು, ಜೀವವುಳಿಸುವ ವೈದ್ಯರಿಗೆ ಅನ್ಯಾಯವಾಗುವುದು ತಪ್ಪಿತು, ಜನರಿಗೆ ದೂರು ಸಲ್ಲಿಸುವ ಅಧಿಕಾರವೂ ಸುಲಭವಾಯಿತು.

ಪ್ರಜಾವಾಣಿ, ಸಂಗತ ಜೂನ್ 15, 2017, 2017

ಪ್ರಜಾವಾಣಿ, ಸಂಗತ ಮಾರ್ಚ್ 23, 2017

ಪ್ರಜಾವಾಣಿ, ಸಂಗತ ಜನವರಿ 10, 2017

 

ಈ ಲೇಖನಕ್ಕೆ ಡಾ॥ ಸುಧಾ ಮತ್ತು ಅಂದಿನ ಆರೋಗ್ಯ ಸಚಿವ ಶ್ರೀ ಕೆ ಆರ್ ರಮೇಶ್ ಕುಮಾರ್ ಅವರ ಪ್ರತಿಕ್ರಿಯೆ: https://www.prajavani.net/news/article/2017/01/12/465460.html

 

Be the first to comment

Leave a Reply

Your email address will not be published.


*