ಆರೋಗ್ಯ ಅನುತ್ಪಾದಕವಾಯಿತೇ?

ಪ್ರಜಾವಾಣಿ, ಸೆಪ್ಟೆಂಬರ್ 2, 2021

ಬ್ರಿಟಿಷರಾಳ್ವಿಕೆಯನ್ನು ಕಿತ್ತೊಗೆದು 75 ವರ್ಷಗಳಾಗುತ್ತಿರುವಾಗ, ಆರ್ಥಿಕ ನೀತಿಯ ದಿಕ್ಕು ಬದಲಿಸಿ 30 ವರ್ಷಗಳಾಗುತ್ತಿವೆ. ಈಗಿನ ಪಥವು ಹಿಮ್ಮುಖವಾಗಿ ಸ್ವಾತಂತ್ರ್ಯ ಸೇನಾನಿಗಳ ಕನಸುಗಳನ್ನು, ಅವರು ಕಟ್ಟಿದ್ದ ಸಾಧನೆ-ಸಂಸ್ಥೆಗಳನ್ನು ಕುಟ್ಟಿ ಹಾಕಿ ಮತ್ತೆ ದಾಸ್ಯದೆಡೆಗೆ ಒಯ್ಯುವಂತಿದೆ.

ಭವಿಷ್ಯದೊಂದಿಗೆ ಮುಖಾಬಿಲೆಗೆ ಬಡತನ, ಅಜ್ಞಾನ, ಅನಾರೋಗ್ಯ, ಅಸಮಾನತೆಗಳನ್ನು ತೊಡೆದುಹಾಕಿ, ಪ್ರತಿಯೋರ್ವನಿಗೂ ಪರಿಪೂರ್ಣವಾದ ಜೀವನವನ್ನು ಖಾತರಿಗೊಳಿಸಬಲ್ಲ ಸಾಮಾಜಿಕ, ಆರ್ಥಿಕ, ರಾಜಕೀಯ ಸಂರಚನೆಗಳನ್ನು ರೂಪಿಸಬೇಕು ಎಂದು ಸ್ವಾತಂತ್ರ್ಯದ ಆ ಬೆಳಗಿನಲ್ಲಿ ಪ್ರಧಾನಿ ನೆಹರೂ ಘೋಷಿಸಿದ್ದರು, ಅದಕ್ಕೆ ಭದ್ರ ಬುನಾದಿಯನ್ನೂ ಸಿದ್ಧಪಡಿಸಿದ್ದರು. ಸ್ವಾತಂತ್ರ್ಯಪೂರ್ವದಲ್ಲೇ (1940) ಕರ್ನಲ್ ಸಾಹಿಬ್ ಸಿಂಗ್ ಸೋಖಿ ಅಧ್ಯಕ್ಷತೆಯ ಆರೋಗ್ಯ ಯೋಜನೆಯ ಉಪಸಮಿತಿಯು ಸರಕಾರವೇ ಸಮಗ್ರ ಆರೋಗ್ಯ ಸೇವೆಗಳನ್ನು ಉಚಿತವಾಗಿ ಒದಗಿಸಬೇಕು, ಆಧುನಿಕ ವೈದ್ಯರನ್ನೇ ಸೇವೆಗೆ ನಿಯೋಜಿಸಬೇಕು, ಸಾವಿರ ಜನಸಂಖ್ಯೆಗೆ ಒಬ್ಬ ವೈದ್ಯನಿರಬೇಕು, ಔಷಧಗಳು ಹಾಗೂ ಉಪಕರಣಗಳು ಸಾರ್ವಜನಿಕ ರಂಗದಲ್ಲೇ ಉತ್ಪಾದಿಸಲ್ಪಡಬೇಕು ಎಂದು ಸಲಹೆ ನೀಡಿತ್ತು. ಖಾಸಗಿ ಹಿತಾಸಕ್ತಿಗಳಿಗಾಗಲೀ, ಆಯುರ್ವೇದ ಇತ್ಯಾದಿ ಪದ್ಧತಿಗಳಿಗಾಗಲೀ ಯಾವುದೇ ಮಹತ್ವವನ್ನು ಅದು ನೀಡಿರಲಿಲ್ಲ. ಮುಂದೆ 1943ರಲ್ಲಿ ಸರ್ ಜೋಸೆಫ್ ಭೋರ್ ಅವರ ಸಮಿತಿಯು ಕೂಡ ಸೋಖಿ ಸಮಿತಿಯ ಆಶಯಗಳನ್ನೇ ಬೆಂಬಲಿಸಿ, ಪ್ರತಿ 10-20 ಸಾವಿರ ಜನತೆಗೆಂಬಂತೆ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಪ್ರತಿ ಜಿಲ್ಲೆಗೊಂದು 2500 ಹಾಸಿಗೆಗಳ ತೃತೀಯ ಸ್ತರದ ಆಸ್ಪತ್ರೆಗಳಿರಬೇಕು ಎಂದು ಸಲಹೆ ನೀಡಿತು.

ನೆಹರೂ ಸರಕಾರದ ಮೊದಲ ಮೂರು ಪಂಚವಾರ್ಷಿಕ ಯೋಜನೆಗಳ ಅಂತ್ಯಕ್ಕೆ 4631 ಆರೋಗ್ಯ ಕೇಂದ್ರಗಳಾದವು; ದಿಲ್ಲಿಯ ಏಮ್ಸ್, ಚಂಡೀಗಢದ ಪಿಜಿಐ, ಬೆಂಗಳೂರಿನ ಮನೋರೋಗ ಸಂಸ್ಥೆ, ಪುಣೆಯ ರಾಷ್ಟ್ರೀಯ ವೈರಾಣು ಸಂಸ್ಥೆ ಮುಂತಾದ ಅತ್ಯುನ್ನತ ವೈದ್ಯಕೀಯ ಹಾಗೂ ಸಂಶೋಧನಾ ಸಂಸ್ಥೆಗಳು ಸ್ಥಾಪನೆಗೊಂಡವು, ಬ್ರಿಟಿಷರು ತೆರೆದಿದ್ದ ಲಸಿಕೆ ಸಂಶೋಧನಾ ಸಂಸ್ಥೆಗಳು ಬಲಗೊಂಡವು. ಹಿಂದುಸ್ಥಾನ್ ಆಂಟಿಬಯಾಟಿಕ್ಸ್, ಐಡಿಪಿಎಲ್ ನಂತಹ ಸಂಸ್ಥೆಗಳು ಸಾರ್ವಜನಿಕ ಕ್ಷೇತ್ರದಲ್ಲಿ ಸ್ಥಾಪನೆಯಾದವು. ಆಧುನಿಕ ವೈದ್ಯಕೀಯ ಕಾಲೇಜುಗಳು 1946ರಲ್ಲಿ 15 ಇದ್ದುದು 1965ರಲ್ಲಿ 81ರಷ್ಟಾದವು, ಸೀಟುಗಳು 1200 ರಿಂದ 10000ಕ್ಕೇರಿದವು. ಮಲೇರಿಯಾ, ಕ್ಷಯ, ಕುಷ್ಠ, ಕಾಲೆರಾ ಮುಂತಾದವುಗಳ ನಿಯಂತ್ರಣಕ್ಕಾಗಿ ರಾಷ್ಟ್ರೀಯ ಕಾರ್ಯಕ್ರಮಗಳೂ ಆರಂಭಗೊಂಡವು; 1947ರಲ್ಲಿ ಮಲೇರಿಯಾದಿಂದ ವರ್ಷಕ್ಕೆ ಎಂಟು ಕೋಟಿ ಸೋಂಕಿತರಾಗಿ 8 ಲಕ್ಷ ಸಾವನ್ನಪ್ಪುತ್ತಿದ್ದರೆ, 1961ರಲ್ಲಿ ಸೋಂಕು 50 ಸಾವಿರಕ್ಕಿಳಿಯಿತು, ಸಾವುಗಳು ಅತಿ ಕಡಿಮೆಯಾದವು.

ನೆಹರೂ ನಂತರ ಈ ಸಾಧನೆಗಳು ಮುಂದುವರಿಯಲಿಲ್ಲ. ತೊಂಬತ್ತರ ಆರಂಭದಲ್ಲಿ ಹೊಸ ಆರ್ಥಿಕ ನೀತಿಯೆಡೆಗೆ ಹೊರಳಿದಾಗ ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರಗಳು ಅನುತ್ಪಾದಕವೆನಿಸಿದವು, ಸಾರ್ವಜನಿಕ ಆಸ್ಪತೆಗಳಲ್ಲಿ ಶುಲ್ಕಗಳೂ ಬಂದವು, ಉನ್ನತ ಶಿಕ್ಷಣ ಖಾಸಗಿಯವರಿಗೆ ವಹಿಸಲ್ಪಟ್ಟಿತು,  ಶಿಕ್ಷಣ ಹಾಗೂ ಆರೋಗ್ಯಸೇವೆಗಳು ಉಚಿತವಾಗಿರಬೇಕೆಂಬ ಸ್ವಾತಂತ್ರ್ಯಯೋಧರ ಆಶಯಗಳು ಅಂದೇ ಮಣ್ಣುಪಾಲಾದವು.

ಭೋರ್ ಸಮಿತಿಯನುಸಾರ ಈಗ 1,30,000 ಪ್ರಾಥಮಿಕ ಆರೋಗ್ಯ ಕೇಂದ್ರಗಳಿರಬೇಕಾದಲ್ಲಿ 30045 ಮಾತ್ರ ಇವೆ, ಇವುಗಳಲ್ಲೂ 24%ರಷ್ಟು ವೈದ್ಯರಿಲ್ಲ, 35-50%ರಷ್ಟು ಸಹಾಯಕ ಸಿಬ್ಬಂದಿಯಿಲ್ಲ. ಇವನ್ನು ಸುಧಾರಿಸುವ ಬದಲಿಗೆ, ಆರೋಗ್ಯ ಕೇಂದ್ರಗಳಿಂದ ಜಿಲ್ಲಾಸ್ಪತ್ರೆಗಳವರೆಗೆ ಎಲ್ಲವನ್ನೂ ಖಾಸಗಿ ಗುತ್ತಿಗೆಗೆ ಒಪ್ಪಿಸಿ, ಉಪಕೇಂದ್ರಗಳನ್ನು ಬದಲಿ ಪದ್ಧತಿ-ಯೋಗಗಳ ಸೌಖ್ಯಾಲಯಗಳನ್ನಾಗಿ ಮಾಡಿ, ಕಾರ್ಪರೇಟ್ ಶಕ್ತಿಗಳ ಟೆಲಿಮೆಡಿಸಿನ್ ಜಾಲಕ್ಕೆ ಜೋಡಿಸುವ ಯೋಜನೆಗಳಾಗುತ್ತಿವೆ.

ಭೋರ್ ಸಮಿತಿಯು ರಾಷ್ಟ್ರೀಯ ಉತ್ಪನ್ನದ ಶೇ. 15ನ್ನು ಆರೋಗ್ಯ ಸೇವೆಗಳಿಗೆ ಒದಗಿಸಬೇಕೆಂದು ಹೇಳಿತ್ತು (ಅತ್ಯುತ್ತಮ ಆರೋಗ್ಯ ಸೇವೆಗಳಿರುವ ದೇಶಗಳಲ್ಲಿಂದು 10-11% ವ್ಯಯಿಸಲಾಗುತ್ತಿದೆ). ಹನ್ನೊಂದನೇ ಯೋಜನೆಯಲ್ಲಿ (2007-12) ಇದು ಕೇವಲ ಶೇ. 0.9 ಆಯಿತು. ಈಗಿನ ಸರಕಾರವು 2017ರ ಆರೋಗ್ಯ ನೀತಿಯಲ್ಲಿ 2025ಕ್ಕೆ ಶೇ. 2.5ರಷ್ಟು ಅನುದಾನವಿರಲಿದೆ ಎಂದು ಹೇಳಿತಾದರೂ, ಅದೆಲ್ಲೂ ಕಾಣುತ್ತಿಲ್ಲ. ಬದಲಿಗೆ, ಕಳೆದ ವರ್ಷದ ಖರ್ಚಿಗಿಂತಲೂ 7000 ಕೋಟಿ ಕಡಿಮೆ ಅನುದಾನ ಒದಗಿಸಿ, ನೀರು-ನೈರ್ಮಲ್ಯಗಳ ಖರ್ಚನ್ನು ಆರೋಗ್ಯಸೇವೆಗೆ ಸೇರಿಸಿ, 100 ವರ್ಷಗಳಲ್ಲೇ ಮೊದಲಿಗೆ ಆರೋಗ್ಯಕ್ಕೆ 2 ಲಕ್ಷ ಕೋಟಿಗೂ ಮಿಕ್ಕಿ ಹಣ ನೀಡಲಾಗಿದೆ ಎಂದು ಜಾದೂ ಮಾಡಲಾಗಿದೆ. ಸರಕಾರಿ ಆಸ್ಪತ್ರೆಗಳಿಗೆ ಹಣವೊದಗಿಸದೆ ಕೆಡಿಸಿ, ಆಯುಶ್ಮಾನ್ ಭಾರತ ಇತ್ಯಾದಿ ಹೆಸರಲ್ಲಿ ಜನರನ್ನು ದೊಡ್ಡ ಖಾಸಗಿ ಆಸ್ಪತ್ರೆಗಳತ್ತ ತಳ್ಳಲಾಗುತ್ತಿದೆ. ಸಮಗ್ರ ಆರೋಗ್ಯ ಸೇವೆಗಳಿಗೆ ಪ್ರತಿ ವರ್ಷ ಬೇಕಾಗುವ ಕನಿಷ್ಠ 215 ಸಾವಿರ ಕೋಟಿಗಳನ್ನು ಸರಕಾರವು ಒದಗಿಸದಿರುವುದರಿಂದ ಶೇ. 80ರಷ್ಟು ಖರ್ಚನ್ನು ಜನರೇ ವ್ಯಯಿಸಿ ಬಡತನಕ್ಕೆ ತಳ್ಳಲ್ಪಡುತ್ತಿದ್ದಾರೆ.

ಈ ಹಿಂದೆ ಅನೇಕ ವೈದ್ಯರು ತಮ್ಮ ಊರುಗಳಲ್ಲಿ ಸಣ್ಣ ಖಾಸಗಿ ಆಸ್ಪತ್ರೆಗಳನ್ನು ನಡೆಸಿ ಶೇ.70ರಷ್ಟು ಆರೋಗ್ಯ ಸೇವೆಗಳನ್ನು ಒದಗಿಸುವಂತಾಗಿತ್ತು. ಈಗ ಬಗೆಬಗೆಯ ನಿಯಂತ್ರಣಗಳನ್ನು ಹೇರಿ ಅವನ್ನು ನಡೆಸಲಸಾಧ್ಯವಾಗುವಂತೆ ಮಾಡಲಾಗುತ್ತಿದೆ. ಅತ್ತ ಕಾರ್ಪರೇಟ್ ಶಕ್ತಿಗಳಿಗೆ ನಗರಗಳಲ್ಲಿ ಬೃಹತ್ ಆಸ್ಪತ್ರೆಗಳನ್ನು ನಿರ್ಮಿಸಲು ಎಕರೆಗಟ್ಟಲೆ ಜಾಗವನ್ನೂ, ಎಲ್ಲ ಬಗೆಯ ವಿನಾಯಿತಿಗಳನ್ನೂ ನೀಡಲಾಗುತ್ತಿದೆ. ಸರಕಾರಿ ಆಸ್ಪತ್ರೆಗಳನ್ನಷ್ಟೇ ಅಲ್ಲ, ಸಣ್ಣ ಖಾಸಗಿ ಆಸ್ಪತ್ರೆಗಳನ್ನೂ ನುಂಗಲು ಕಾರ್ಪರೇಟ್ ಆಸ್ಪತ್ರೆಗಳಿಗೆ ಅನುಕೂವೊದಗಿಸಲಾಗುತ್ತಿದೆ.

ಸಾವಿರ ಜನರಿಗೊಬ್ಬ ಆಧುನಿಕ ವೈದ್ಯನಿರಬೇಕೆಂಬ ಗುರಿಯನ್ನು ತಲುಪಲಾಗದೆ, 1500 ಜನರಿಗೊಬ್ಬನಂತೆ 9 ಲಕ್ಷದಷ್ಟು ವೈದ್ಯರಿದ್ದಾರೆ, ಜೊತೆಗೆ 8 ಲಕ್ಷದಷ್ಟು ಬದಲಿ ಚಿಕಿತ್ಸಕರನ್ನೂ ತಯಾರಿಸಲಾಗಿದೆ. ಗ್ರಾಮೀಣ ಆರೋಗ್ಯ ಅಭಿಯಾನದಲ್ಲಿ ಉತ್ತಮ ಸಂಬಳಕ್ಕೆ ಆಧುನಿಕ ವೈದ್ಯರನ್ನು ನೇಮಿಸುವ ಬದಲು ಕಡಿಮೆ ಸಂಬಳಕ್ಕೆ 12000ದಷ್ಟು ಬದಲಿ ಚಿಕಿತ್ಸಕರನ್ನು ನೇಮಿಸಲಾಗಿದೆ. ಹೊಸ ಶಿಕ್ಷಣ ನೀತಿಯಲ್ಲಿ ಆಧುನಿಕ ವೈದ್ಯಕೀಯ ಶಿಕ್ಷಣದಲ್ಲಿ ಬದಲಿ ಪದ್ಧತಿಗಳನ್ನು ಕಲಬೆರಕೆ ಮಾಡುವ ಪ್ರಸ್ತಾವವಿದ್ದು, ಬೆರಕೆಗಳಿಗೆ ಪರವಾನಿಗೆ ಕೊಡಲು ಎನ್‌ಎಂ‌ಸಿ ಯನ್ನೂ ತರಲಾಗಿದೆ. ಒಟ್ಟಿನಲ್ಲಿ ಆಧುನಿಕ ವೈದ್ಯವಿಜ್ಞಾನವೇ ಆರೋಗ್ಯ ಸೇವೆಗಳನ್ನೊದಗಿಸಬೇಕೆಂಬ ಆಶಯಗಳನ್ನೂ ಹೂತು ಹಾಕಿ, ಅದರ ಮಾನಗೆಡಿಸಿ, ಕಾರ್ಪರೇಟ್ ಆಸ್ಪತ್ರೆಗಳಲ್ಲಿ ಅಲ್ಪ ಸಂಬಳಕ್ಕೆ ಗುಲಾಮರಾಗಲು ಬೆರಕೆ ವೈದ್ಯರು ತಯಾರಾಗಲಿದ್ದಾರೆ.

ವೈದ್ಯಕೀಯ ಶಿಕ್ಷಣವನ್ನೂ ಕಾರ್ಪರೇಟ್ ಚರಣಗಳಿಗೆ ಅರ್ಪಿಸಲಾಗುತ್ತಿದೆ. ನೆಹರೂ ಕಾಲಾಂತ್ಯಕ್ಕೆ 81 ವೈದ್ಯಕೀಯ ಕಾಲೇಜುಗಳಿದ್ದು, ಅವುಗಳಲ್ಲಿ ಕೇವಲ 7 (9%) ಖಾಸಗಿ ಕಾಲೇಜುಗಳಿದ್ದರೆ, ಈಗ ಒಟ್ಟು ಕಾಲೇಜುಗಳು 554ಕ್ಕೇರಿ, ಸೀಟುಗಳು 10 ಸಾವಿರದಿಂದ 83 ಸಾವಿರವಾಗಿವೆ, ಅವುಗಳಲ್ಲಿ 269 (49%) ಖಾಸಗಿ ಕಾಲೇಜುಗಳಾಗಿದ್ದು, 40 ಸಾವಿರ ಸೀಟುಗಳನ್ನು ಹೊಂದಿವೆ. ಈಗ ಎಂಸಿಐಯನ್ನು ಕಿತ್ತೊಗೆದು ಎನ್‌ಎಂಸಿಯನ್ನು ತಂದು, ಕಾರ್ಪರೇಟ್ ಶಕ್ತಿಗಳು ಸೇರಿದಂತೆ ಯಾರು ಬೇಕಾದರೂ, ಎಲ್ಲಿ ಬೇಕಾದರೂ, ಇನ್ನಷ್ಟು ಖಾಸಗಿ ಕಾಲೇಜುಗಳನ್ನು ತೆರೆಯುವುದಕ್ಕೆ ದಾರಿ ತೆರೆಯಲಾಗಿದೆ.

ನೆಹರೂ ಕಾಲದ ಸರಕಾರಿ ಔಷಧ-ಲಸಿಕೆಗಳ ಕಂಪೆನಿಗಳು ಕೂಡ ರೋಗಗ್ರಸ್ತವಾಗಿವೆ, ಮುಚ್ಚಿವೆ. ಔಷಧಗಳ ಮೇಲೆ ವಿದೇಶಿ ಕಂಪೆನಿಗಳ ಹಕ್ಕು ಸ್ವಾಮ್ಯತೆಯನ್ನು ನಿರಾಕರಿಸಿ ನಮ್ಮ ಕಂಪೆನಿಗಳಿಗೆ ಆ ಔಷಧಗಳನ್ನು ಉತ್ಪಾದಿಸಲು ಇತ್ತೀಚಿನವರೆಗೂ ಅವಕಾಶ ನೀಡಲಾಗುತ್ತಿತ್ತು. ಈಗ ಅದಕ್ಕೆ ಅರ್ಜಿಯನ್ನೇ ಹಾಕದಂತೆ ತಡೆಯಲಾಗುತ್ತಿದೆ. ಕೊರೋನ ಲಸಿಕೆಯನ್ನು ಹಕ್ಕುಸ್ವಾಮ್ಯತೆಯಿಂದ ಹೊರಗಿರಿಸಬೇಕೆಂಬ ದಕ್ಷಿಣ ಆಫ್ರಿಕಾದ ಪ್ರಸ್ತಾವಕ್ಕೆ ಭಾರತವು ಅಲ್ಲಿ ಜೊತೆಯಾಗಿದ್ದರೂ, ಇಲ್ಲಿ ಖಾಸಗಿ ಕಂಪೆನಿಗಳ ತಾಳಕ್ಕೆ ಕುಣಿದು, ಲಸಿಕೆ ಅಭಿವೃದ್ಧಿ ಪಡಿಸುವಲ್ಲಿ ಐಸಿಎಂಆರ್, ಎನ್‌ಐವಿ ನೀಡಿದ್ದ ಕೊಡುಗೆಗಳನ್ನೇ ಅಡಗಿಸಲಾಗಿದೆ.

ಹೊಸ ಆರ್ಥಿಕ ನೀತಿಯ ಪರಿಣಾಮಗಳಲ್ಲವೂ ಕೊರೋನ ನಿಭಾವಣೆಯಲ್ಲೇ ಎದ್ದು ತೋರಿವೆ. ನೆಹರೂ ಕಾಲದಲ್ಲಿ ಸರಕಾರಿ ಸಂಸ್ಥೆಗಳ ತಜ್ಞರ ನೇತೃತ್ವದಲ್ಲಿ ಮಲೇರಿಯಾದಂತಹ ರೋಗಗಳನ್ನು ಯಶಸ್ವಿಯಾಗಿ ನಿಭಾಯಿಸಲು ಸಾಧ್ಯವಾಗಿದ್ದರೆ, ಈಗ ಕೊರೋನ ಸೋಂಕನ್ನು ನಿಭಾಯಿಸುವಲ್ಲಿ ತಜ್ಞರೆಲ್ಲರನ್ನೂ ಮೂಲೆಗೆ ತಳ್ಳಿ ಕಾರ್ಪರೇಟ್ ಧಣಿಗಳನ್ನೇ ತಜ್ಞರನ್ನಾಗಿಸಿ, ಅವರ ಸಲಹೆಗಳಂತೆಯೇ ಲಾಕ್ ಡೌನ್, ಶಾಲೆ ಬಂದ್, ಅಲ್ಲಲ್ಲಿ ಆರ್‌ಟಿ ಪಿಸಿಆರ್, ಮತ್ತೀಗ ಕಡ್ಡಾಯ ಲಸಿಕೆ ಎಂದೆಲ್ಲ ಹೇರಲಾಗುತ್ತಿದೆ, ಸೋಂಕೆಂಬ ಪರಿಕಲ್ಪನೆಯೇ ಇಲ್ಲದ ಬದಲಿ ಪದ್ಧತಿಗಳೇ ಕೊರೋನ ಸೋಂಕಿಗೆ ಪರಿಹಾರವೆಂಬಂತೆ ಬಿಂಬಿಸಲಾಗುತ್ತಿದೆ.

ಕಾಂಕ್ರೀಟಿಗೆ ಸುರಿಯಲು ಹಣವಿದೆ, ಆರೋಗ್ಯ-ಶಿಕ್ಷಣಗಳಿಗೆ ಇಲ್ಲವಾಗಿದೆ. ಹಾಗಾಗಿ ಆರೋಗ್ಯ ಸೇವೆಗಳು ಕಾರ್ಪರೇಟ್ ಕಪಿಗಳ ಮುಷ್ಠಿಯೊಳಗಾಗಿ ಹಿಮ್ಮುಖವಾಗಿವೆ.

Be the first to comment

Leave a Reply

Your email address will not be published.


*