ಅಲ್ಪಾವಧಿ ವೈದ್ಯ ಶಿಕ್ಷಣ: ಪರಿಹಾರವೇ ಸಮಸ್ಯೆಯಾದರೆ?

ಮೂರುವರೆ ವರ್ಷಗಳ ಕಿರು ಅವಧಿಯ ವೈದ್ಯಕೀಯ ಪದವಿಯನ್ನು ಪ್ರಾರಂಭಿಸುವ ಪ್ರಸ್ತಾವ ಕೇಂದ್ರ ಸರ್ಕಾರದ ಪರಿಶೀಲನೆಯಲ್ಲಿದೆ. ಜಿಲ್ಲಾ ಆಸ್ಪತ್ರೆಗಳಲ್ಲಿ ತರಬೇತಿ ಪಡೆಯಲಿರುವ ಈ ವೈದ್ಯಕೀಯ ಪದವೀಧರರು ಗ್ರಾಮೀಣ ಪ್ರದೇಶಕ್ಕಷ್ಟೇ ಮೀಸಲಂತೆ.ಈ ಪ್ರಸ್ತಾವ. ನಗರ ಮತ್ತು ಹಳ್ಳಿಗಳ ನಡುವಿನ ಅಂತರವನ್ನು ಇನ್ನಷ್ಟು ಹೆಚ್ಚಿಸಲಿದೆ.

ಪ್ರಜಾವಾಣಿ, ಮಾರ್ಚ್ 20, 2010 [ಇಲ್ಲಿದೆ]

ನಮ್ಮಲ್ಲಿ ಯೋಜನೆಗಳ ಹಿಂದೆ ಬೇರೆಯೇ ಆದ ಯೋಚನೆಗಳು ಇರುವುದರಿಂದಾಗಿಯೇ ಬಹುಷಃ ಹಲವಾರು ಕಲ್ಯಾಣ ಕಾರ್ಯಕ್ರಮಗಳು ಉದ್ದೇಶಿತ ಫಲಾನುಭವಿಗಳನ್ನು ತಲುಪುವ ಮೊದಲೇ ಮಧ್ಯದಲ್ಲೆಲ್ಲೋ ಕಮರಿ ಸೋಲುತ್ತಿವೆ. ಹಳ್ಳಿಗಳಲ್ಲಿ ವಾಸಿಸುತ್ತಿರುವ ದೇಶದ ಶೇ. ೮೦ರಷ್ಟು ಜನರಿಗೆ ಆರೋಗ್ಯ ಸೇವೆಯನ್ನು ಒದಗಿಸುವುದು ಅತ್ಯಗತ್ಯವೆನ್ನುವುದರಲ್ಲಿ ಎರಡು ಮಾತಿಲ್ಲದಿದ್ದರೂ, ಅದಕ್ಕಾಗಿ ಚುಟುಕು ವೈದ್ಯರನ್ನು ಸಿದ್ಧಪಡಿಸುವ ಹೊಸ ಯೋಜನೆಯು ಕೂಡಾ ಹೀಗೆ ಅಡ್ಡ ದಾರಿ ಹಿಡಿಯುವ ಸಾಧ್ಯತೆಗಳೇ ಹೆಚ್ಚು.

ಸ್ವಾತಂತ್ರ್ಯ ಸಿಕ್ಕಿ 64 ವರ್ಷಗಳ ನಂತರವೂ ವೈದ್ಯರು ಹಳ್ಳಿಗಳತ್ತ ಮುಖ ಮಾಡುವಂತೆ ಪ್ರೇರೇಪಿಸಲು ಸಾಧ್ಯವಾಗಿಲ್ಲ, ಪ್ರಲೋಭನೆಯ ತಂತ್ರಗಳಾಗಲೀ, ಒತ್ತಡದ ತಂತ್ರಗಳಾಗಲೀ ಫಲ ನೀಡಿಲ್ಲ. ಕಿರಿಯ ವೈದ್ಯರು ಹಳ್ಳಿಗಳಲ್ಲಿ ಸೇವೆ ಸಲ್ಲಿಸಬೇಕೆಂದು ಭಾಷಣಗಳಲ್ಲಿ ಎಲ್ಲರೂ ಅಪ್ಪಣೆ ನೀಡುವವರೇ ಆಗಿರುವುದರಿಂದ ಅವನ್ನು ಯಾರೂ ಕಿವಿಗಳಿಗೆ ಹಾಕಿಕೊಳ್ಳುವುದೂ ಇಲ್ಲ. ನಾನು ಕಲಿಯುತ್ತಿದ್ದ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯರು ಸಭೆಯೊಂದರಲ್ಲಿ ಇದನ್ನೇ ಹೇಳಿದಾಗ ವೇದಿಕೆಯಲ್ಲಿದ್ದ ನಿವೃತ್ತ ಪ್ರಾಚಾರ್ಯರೊಬ್ಬರು ಮಧ್ಯ ಪ್ರವೇಶಿಸಿ, ತಮ್ಮಂತಹಾ ಹಿರಿಯ ವೈದ್ಯರು ನಿವೃತ್ತರಾದಾಗ ಹಳ್ಳಿಗಳಿಗೆ ಹೋಗುವುದೊಳ್ಳೆಯದು, ಯಾವುದೇ ಸೌಲಭ್ಯಗಳ ಅಗತ್ಯವಿಲ್ಲದೆಯೇ ರೋಗವನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡುವುದು ಅಪಾರ ಅನುಭವವುಳ್ಳ ತಮ್ಮಂತವರಿಗೆ ಸುಲಭವಾಗುತ್ತದೆ, ಕಿರಿಯ ವೈದ್ಯರುಗಳು ಕೆಲ ವರ್ಷಗಳಾದರೂ ನಗರಗಳಲ್ಲಿದ್ದು ತಮ್ಮ ವೃತ್ತಿ ಹಾಗೂ ಖಾಸಗಿ ಜೀವನಗಳೆರಡರಲ್ಲೂ ಅನುಭವವನ್ನು ಗಳಿಸಲಿ ಎಂದು ಅವರನ್ನು ಚುಚ್ಚಿದ್ದರು.

ಇತ್ತೀಚಿನ ವರ್ಷಗಳಲ್ಲಿ ಉನ್ನತ ಶಿಕ್ಷಣದ ಖಾಸಗೀಕರಣ ಹಾಗೂ ವ್ಯಾಪಾರೀಕರಣಗಳಿಂದಾಗಿ ಈ ಸಮಸ್ಯೆಯು ಇನ್ನಷ್ಟು ಬಿಗಡಾಯಿಸಿದೆ. ಈ ಹೊಸ ಕಾಲೇಜುಗಳಲ್ಲಿ ಪ್ರವೇಶದಿಂದ ಹಿಡಿದು ಪದವಿ ನೀಡುವಿಕೆಯವರೆಗೆ ಎಲ್ಲ ಸ್ತರಗಳಲ್ಲೂ ದುಡ್ಡಿನ ಕಾರುಬಾರು, ಹಲವು ಕಾಲೇಜುಗಳಲ್ಲಿ ಲೆಕ್ಕಕ್ಕುಂಟು ಆಟಕ್ಕಿಲ್ಲವೆನ್ನುವ ಶಿಕ್ಷಕರ ದೆಸೆಯಿಂದ ಅರೆಬೆಂದ ವೈದ್ಯರುಗಳನ್ನು ತಯಾರಿಸುವಂತಾಗಿರುವುದು, ಈ ಕಾಲೇಜುಗಳ ಕಳಪೆ ಗುಣಮಟ್ಟದ ಬಗ್ಗೆ ಭಾರತೀಯ ವೈದ್ಯಕೀಯ ಪರಿಷತ್ತಾಗಲೀ, ವಿಶ್ವವಿದ್ಯಾಲಯಗಳಾಗಲೀ, ಸರಕಾರವಾಗಲೀ  ಯಾವುದೇ ಕ್ರಮವಹಿಸದೆ ತೆಪ್ಪಗಿರುವುದು ನಿಜಕ್ಕೂ ಕಳವಳಕಾರಿಯಾಗಿದ್ದು, ಈ ಎಲ್ಲಾ ನ್ಯೂನತೆಗಳಿಗೆ ಜನಸಾಮಾನ್ಯರೇ ದುಬಾರಿಯಾದ ಬೆಲೆ ತೆರಬೇಕಾದ ದುಸ್ಥಿತಿ ನಿರ್ಮಾಣಗೊಳ್ಳುತ್ತಿದೆ.

ಹಳ್ಳಿಗಳಲ್ಲಿ ನೆಲೆಸಲು ವೈದ್ಯರು ಹಿಂಜರಿಯುವುದಕ್ಕೆ ನಗರಗಳಲ್ಲಿ ಹೆಚ್ಚಿನ ಸಂಪಾದನೆ ಸಾಧ್ಯವೆನ್ನುವುದಷ್ಟೇ ಕಾರಣವೇ? ಕೆಲವರಲ್ಲಿ ಅದೊಂದು ಮುಖ್ಯವಾದ ಕಾರಣವಾಗಿರಬಹುದಾದರೂ, ಸೌಲಭ್ಯಗಳ ಕೊರತೆ (ಆಸ್ಪತ್ರೆಗಳು, ಉಪಕರಣಗಳು, ಕ್ಷಕಿರಣ, ಪ್ರಯೋಗಾಲಯ ಇತ್ಯಾದಿ), ಅನುಭವದ ಕೊರತೆಯಿಂದಾಗಿ ಹಿಂಜರಿಕೆ, ಇನ್ನಷ್ಟು ಕಲಿಯಬೇಕೆನ್ನುವ ಹಂಬಲ, ಹಿರಿಯರು ಹಾಗೂ ಹಿತೈಷಿಗಳ ಒತ್ತಡ ಇತ್ಯಾದಿ ಕಾರಣಗಳೂ ಇರಬಹುದು. ಇವುಗಳಲ್ಲಿ ಕೆಲವನ್ನಾದರೂ ಸರಿಪಡಿಸಲು ಸಾಧ್ಯವಿಲ್ಲವೇ?

ಆಧುನಿಕ ವೈದ್ಯರು ಹಳ್ಳಿಗಳಿಗೆ ಹೋಗಲು ಹಿಂಜರಿಯುತ್ತಿರುವುದರಿಂದ ಬದಲಿ ಚಿಕಿತ್ಸಾ ಪದ್ಧತಿಗಳಲ್ಲಿ ತರಬೇತಾದವರು ಹಾಗೂ ಯಾವ ತರಬೇತಿಯೂ ಇಲ್ಲದ ಸ್ವಯಂಘೋಷಿತ ಠಕ್ಕ ವೈದ್ಯರು ಈ ಪ್ರದೇಶಗಳಲ್ಲಿ ನೆಲೆಯೂರುತ್ತಿದ್ದು, ಹೇಳಿಕೊಳ್ಳುವಂತಹಾ ಪ್ರಯೋಜನಗಳೇನೂ ಇಲ್ಲದಿರುವ ಅಥವಾ ಅನಾಹುತಗಳಿಗೂ ಕಾರಣವಾಗಬಲ್ಲ ಬದಲಿ ವ್ಯವಸ್ಥೆಗಳನ್ನೇ ಹಳ್ಳಿಗಳಲ್ಲಿರುವವರು ನೆಚ್ಚಿಕೊಳ್ಳುವಂತಾಗಿದೆ. ಸರಕಾರವೂ ಹಳ್ಳಿಗಳಲ್ಲಿ ಬದಲಿ ಪದ್ಧತಿಗಳನ್ನು ಪೋಷಿಸುತ್ತಿರುವುದು ಖೇದನೀಯವೂ, ಖಂಡನಾರ್ಹವೂ ಆಗಿದೆ. ಏನೂ ಇಲ್ಲದಿರುವಾಗ ಇದಾದರೂ ಆದೀತೆನ್ನುವ ಧೋರಣೆಯು ಹಳ್ಳಿಗಳಲ್ಲಿರುವವರಿಗೆ ಮಾಡಲಾಗುತ್ತಿರುವ ಅನ್ಯಾಯವಷ್ಟೆ ಅಲ್ಲ, ಅಪಾಯಕಾರಿಯೂ ಆಗಬಹುದು.

ಆಧುನಿಕ ವೈದ್ಯ ವಿಜ್ಞಾನವನ್ನು ಕೇವಲ ಮೂರೂವರೆ ವರ್ಷಗಳಲ್ಲಿ ಕಲಿಸಿ ಚುಟುಕು ವೈದ್ಯರನ್ನು ತಯಾರಿಸಬಹುದೆನ್ನುವುದು ವೈದ್ಯ ವಿಜ್ಞಾನಕ್ಕೆ ಮಾಡುವ ಅಪಚಾರವಾದರೆ, ಹಳ್ಳಿಗಳಲ್ಲಿರುವವರಿಗೆ ಅಂತಹವರು ಸಾಕೆನ್ನುವುದು ಅವರನ್ನು ಅಪಮಾನಿಸಿದಂತೆ. ಇಂತಹ ಚುಟುಕು ವೈದ್ಯರಿಂದ ಹೆಚ್ಚಿನ ಪ್ರಯೋಜನವೇನೂ ಆಗದು; ಬದಲಿಗೆ ಇನ್ನಷ್ಟು ಅವಾಂತರಗಳೂ, ಆಭಾಸಗಳೂ ಸೃಷ್ಟಿಯಾಗಿ ಎಲ್ಲ ರೀತಿಯ ತೊಂದರೆಗಳಾಗುವ ಸಾಧ್ಯತೆಗಳೇ ಹೆಚ್ಚು. ಈಗಾಗಲೇ ನಡೆಯುತ್ತಿರುವ ಕಾಲೇಜುಗಳಲ್ಲಿಯೇ ಉತ್ತಮ ಗುಣಮಟ್ಟವನ್ನು ಕಾಯುವಲ್ಲಿ ಭಾರತೀಯ ವೈದ್ಯಕೀಯ ಪರಿಷತ್ತು ಮತ್ತಿತರ ಸಂಸ್ಥೆಗಳು ವಿಫಲವಾಗಿರುವಾಗ, ಸಣ್ಣ ಆಸ್ಪತ್ರೆಗಳಲ್ಲಿ ಆರಂಭಿಸಲುದ್ದೇಶಿಸಲಾಗಿರುವ ಚುಟುಕು ತರಬೇತಿಯ ಗುಣಮಟ್ಟವು ಹೇಗಿರಬಹುದೆನ್ನುವುದನ್ನು ಊಹಿಸುವುದಕ್ಕೂ ಭಯವಾಗುತ್ತದೆ. ಈ ಚುಟುಕು ತರಬೇತಿ ನೀಡುವುದಕ್ಕೆ ಇನ್ನೊಂದಷ್ಟು ಆಸ್ಪತ್ರೆಗಳಲ್ಲಿ ಅರ್ಹತಾ ಪರಿಶೀಲನೆ ನಡೆಸುವ ಹೊಸ ಅವಕಾಶಗಳನ್ನು ಸೃಷ್ಟಿಸುವುದಷ್ಟೇ ಈ ಯೋಜನೆಯ ಹಿಂದಿರುವ ಯೋಚನೆಯಾಗಿದೆಯೇ ಎನ್ನುವ ಸಂಶಯವೂ ಏಳುತ್ತದೆ.

ಆಧುನಿಕ ವೈದ್ಯರು ಹಳ್ಳಿಗಳಿಗೆ ಹೋಗುವುದಿಲ್ಲ, ಬದಲಿ ಪದ್ಧತಿಯಿಂದ ಪ್ರಯೋಜನವಿಲ್ಲ, ಹೊಸ ತರಬೇತಿ ಸರಿಯಲ್ಲವೆಂದಾದರೆ ಬೇರೆ ದಾರಿಯೇನು? ಮನಸ್ಸಿದ್ದರೆ ಮಾರ್ಗಗಳಿವೆ, ಬದ್ಧತೆಯಿದ್ದರೆ ಹಲವು ಸಾಧ್ಯತೆಗಳೂ ಇವೆ.

ನಮ್ಮ ದೇಶದಲ್ಲಿ ಈಗಾಗಲೇ 300ಕ್ಕೂ ಹೆಚ್ಚು ವೈದ್ಯಕೀಯ ವಿದ್ಯಾಲಯಗಳಿದ್ದು ಪ್ರತೀ ವರ್ಷ 30000ಕ್ಕೂ ಹೆಚ್ಚು ವೈದ್ಯರು ಅವುಗಳಲ್ಲಿ ತರಬೇತಾಗಿ ಹೊರಬರುತ್ತಾರೆ. ಹೊಸದಾಗಿ ಉತ್ತೀರ್ಣರಾದ ವೈದ್ಯರಿಗೆ ಒಂದು ವರ್ಷದ ತರಬೇತಿಯಿದ್ದು, ಅದರಲ್ಲಿ ಮೂರು ತಿಂಗಳ ಕಾಲ ಸಮುದಾಯ ವೈದ್ಯವಿಜ್ಞಾನದಲ್ಲಿ ತರಬೇತಿಗಾಗಿ ಗ್ರಾಮೀಣ ಆರೋಗ್ಯ ಕೇಂದ್ರಗಳಲ್ಲಿ ಕಡ್ಡಾಯವಾಗಿ ವಾಸ್ತವ್ಯ ಮಾಡಬೇಕಾಗುತ್ತದೆ. ಕೆಲವೊಂದು ಕಾಲೇಜುಗಳು ಈ ಶರತ್ತನ್ನು ಪಾಲಿಸುತ್ತಿದ್ದರೂ, ಹಲವು ಕಾಲೇಜುಗಳಲ್ಲಿ ಇದು ಕೇವಲ ಕಾಟಾಚಾರಕ್ಕಾಗಿಯಷ್ಟೇ ನಡೆಯುತ್ತಿದೆ. ಇದನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದೇ ಆದರೆ, ಪ್ರತೀ ಕಾಲೇಜಿನಿಂದಲೂ ಆರೋಗ್ಯ ಕೇಂದ್ರವೊಂದಕ್ಕೆ 2-3 ವೈದ್ಯರಂತೆ ಏಳೆಂಟು ಗ್ರಾಮೀಣ ಆರೋಗ್ಯ ಕೇಂದ್ರಗಳಲ್ಲಿ ನಿರಂತರವಾಗಿ ಈ ಕಿರಿಯ ವೈದ್ಯರ ಸೇವೆಯನ್ನು ಬಳಸಿಕೊಳ್ಳಬಹುದು. ಅಗತ್ಯವಾದ ಅನುಕೂಲಗಳನ್ನೂ, ಸಾಕಷ್ಟು ಭದ್ರತೆಯನ್ನೂ ಒದಗಿಸಿದರೆ, ಆ ಅನುಭವವನ್ನು ಪಡೆಯಲು ಯಾರೂ ಹಿಂಜರಿಯಲಾರರು. ಅದರೊಂದಿಗೆ, ಗ್ರಾಮೀಣ ಪ್ರದೇಶಗಳಲ್ಲಿ ಅಂತಹಾ ಸೇವೆಯನ್ನೊದಗಿಸಲು ಅವರನ್ನು ಅಣಿಗೊಳಿಸುವ ಗುರುತರವಾದ ಜವಾಬ್ದಾರಿಯೂ ಕಾಲೇಜಿನ ಮೇಲಿರುವುದರಿಂದ ಶಿಕ್ಷಣದ ಮಟ್ಟವೂ ಸುಧಾರಿಸಬಹುದು. ಒಂದು ಯಾ ಎರಡು ವರ್ಷ ಹಳ್ಳಿಗಳಲ್ಲಿ ಸೇವೆ ಸಲ್ಲಿಸಿದ ಕಿರಿಯ ವೈದ್ಯರಿಗೆ ಸ್ನಾತಕೋತ್ತರ ವ್ಯಾಸಂಗಕ್ಕೆ ಪ್ರವೇಶ ಪಡೆಯಲು ನೆರವಾದರೆ ಅಥವಾ ಅದರ ಶುಲ್ಕದಲ್ಲಿ ವಿನಾಯಿತಿಯನ್ನು ನೀಡಿದರೆ ಹಳ್ಳಿಗಳಲ್ಲಿ ದುಡಿಯುವುದಕ್ಕೆ ಹಲವು ಕಿರಿಯ ವೈದ್ಯರು ಸಿದ್ದರಾಗುವುದರಲ್ಲಿ ಸಂದೇಹವೇ ಇಲ್ಲ.

ಅದೇ ರೀತಿ, ಈಗಿರುವ ಕಾಲೇಜುಗಳಲ್ಲಿ ವಿವಿಧ ವಿಶೇಷತೆಗಳ ಸ್ನಾತಕೋತ್ತರ ವಿದ್ಯಾರ್ಥಿಗಳೂ ಗ್ರಾಮೀಣ ಆರೋಗ್ಯ ಕೇಂದ್ರಗಳಲ್ಲಿ 4-6 ತಿಂಗಳ ಕಾಲ ತರಬೇತಿ ಪಡೆಯುವುದನ್ನು ಕಡ್ಡಾಯಗೊಳಿಸಬಹುದು. ಗ್ರಾಮೀಣ ಪ್ರದೇಶಗಳ ರೋಗರುಜಿನಗಳ ಬಗ್ಗೆ ಹಾಗೂ ಆರೋಗ್ಯ ಕೇಂದ್ರವನ್ನು ನಡೆಸುವ ಬಗ್ಗೆ ಅನುಭವಗಳೂ ಇದರಿಂದ ದೊರೆಯುತ್ತವೆ. ಮೇಲೆ ಸೂಚಿಸಿದಂತೆ ಕಡ್ಡಾಯ ತರಬೇತಿಗಾಗಿ ಬರುವ ಕಿರಿಯ ವೈದ್ಯರಿಗೂ ಇವರು ನೆರವು ಹಾಗೂ ಮಾರ್ಗದರ್ಶನವನ್ನು ನೀಡಬಹುದು.

 ಹೊಸದಾಗಿ ಚುಟುಕು ತರಬೇತಿಯನ್ನು ಆರಂಭಿಸುವ ಬದಲಿಗೆ, ಈಗಿರುವ ವೈದ್ಯಕೀಯ ಕಾಲೇಜುಗಳಲ್ಲೇ ಗ್ರಾಮೀಣ ಆರೋಗ್ಯ ರಕ್ಷಣೆಯ ಬಗ್ಗೆ ಪೂರ್ಣ ಪ್ರಮಾಣದ ಹೊಸ ತರಬೇತಿಯನ್ನು ಆರಂಭಿಸಬಹುದು. ಗ್ರಾಮೀಣ ಸೇವೆಗೆಂದೇ ಮೀಸಲಾದ ಪೂರ್ಣ ಪ್ರಮಾಣದ ೨೫-೩೦ ವೈದ್ಯರನ್ನು ತರಬೇತುಗೊಳಿಸುವ ಜವಾಬ್ದಾರಿಯನ್ನು ಈ ಕಾಲೇಜುಗಳಿಗೆ ವಹಿಸಬಹುದು. ಈಗಿರುವ ವೈದ್ಯಕೀಯ ಶಿಕ್ಷಣ ವ್ಯವಸ್ಥೆಯನ್ನು ಬದಲಿಸಿ, ಪ್ರಾಥಮಿಕ ಅಧ್ಯಯನದ ಬಳಿಕ ನೇರವಾಗಿ ವಿಶೇಷ ವ್ಯಾಸಂಗವನ್ನು ಮಾಡಬಲ್ಲ ವ್ಯವಸ್ಥೆಯನ್ನು ಜಾರಿಗೆ ತಂದರೆ, ಸಾಕಷ್ಟು ನುರಿತ ವೈದ್ಯರನ್ನು ತರಬೇತುಗೊಳಿಸುವುದು ಸುಲಭವಾಗುತ್ತದೆ. ಅದಲ್ಲದೆ, ಗ್ರಾಮೀಣ ಆರೋಗ್ಯ ರಕ್ಷಣೆಯ ಬಗ್ಗೆ ಒಂದು ಯಾ ಒಂದೂವರೆ ವರ್ಷಗಳ ಸ್ನಾತಕೋತ್ತರ ಡಿಪ್ಲೋಮಾ ತರಬೇತಿಯನ್ನೂ ಆರಂಭಿಸಬಹುದು ಹಾಗೂ ಅತ್ಯಲ್ಪ ಶುಲ್ಕದೊಂದಿಗೆ ಯಾ ಉಚಿತವಾಗಿ ಈ ತರಬೇತಿಯನ್ನು ನೀಡುವಂತೆ ಈಗಿರುವ ಕಾಲೇಜುಗಳಿಗೆ ಹೇಳಬಹುದು. ಈಗಾಗಲೇ ಡಿ.ಎನ್. ಬಿ. ವ್ಯಾಸಂಗಕ್ಕೆ ಮಾನ್ಯತೆ ನೀಡಲಾಗಿರುವ ಸಂಸ್ಥೆಗಳಲ್ಲೂ ಗ್ರಾಮೀಣ ಆರೋಗ್ಯ ರಕ್ಷಣೆಯ ಹೊಸ ತರಬೇತಿಯನ್ನು ಆರಂಭಿಸಬಹುದು.

ಇವುಗಳಲ್ಲದೆ ಗ್ರಾಮೀಣ ಪ್ರದೇಶಗಳಲ್ಲಿ ಖಾಸಗಿ ಅಥವಾ ಸಹಕಾರಿ ಆಸ್ಪತ್ರೆಗಳನ್ನು ತೆರೆಯಬಯಸುವವರಿಗೆ ಸೂಕ್ತವಾದ ಎಲ್ಲಾ ನೆರವನ್ನೂ ನೀಡಿ ಉತ್ತೇಜಿಸಬಹುದು. ಖಾಸಗಿ-ಸರಕಾರಿ ಸಹಭಾಗಿತ್ವದಲ್ಲಿ ದೊಡ್ಡ ಆಸ್ಪತ್ರೆಗಳನ್ನೂ ತೆರೆಯಬಹುದು. ನಗರಗಳಲ್ಲಿರುವ ಆಸ್ಪತ್ರೆಗಳು ಹಳ್ಳಿಗಳಲ್ಲಿ ಸೇವೆಯನ್ನೊದಗಿಸಲು ಮುಂದೆ ಬಂದರೆ ಅವುಗಳಿಗೆ ಸೂಕ್ತವಾದ ಪ್ರೋತ್ಸಾಹವನ್ನು ಕಲ್ಪಿಸಬಹುದು. ಗ್ರಾಮೀಣ ಆರೋಗ್ಯ ರಕ್ಷಣೆಗಾಗಿ ಒದಗಿಸಲಾಗಿರುವ ಹಣವು ಯಾರದೋ ಕಿಸೆಗಳನ್ನು ಸೇರುವ ಬದಲು ಇಂತಹಾ ಯೋಜನೆಗಳಿಗೆ ವಿನಿಯೋಗವಾದರೆ ಒಳ್ಳೆಯದು. ಇನ್ನು ಮುಂ‍ದೆ ಹೊಸ ವೈದ್ಯಕೀಯ ಕಾಲೇಜುಗಳನ್ನು ಗ್ರಾಮೀಣ ಹಾಗೂ ಹಿಂದುಳಿದ ಪ್ರದೇಶಗಳಲ್ಲಷ್ಟೇ ಆರಂಭಿಸಲು ಅನುಮತಿ ನೀಡಬೇಕು. ಎಲ್ಲಾ ವೈದ್ಯಕೀಯ ಕಾಲೇಜುಗಳೂ ಗ್ರಾಮೀಣ ಆರೋಗ್ಯ ಕೇಂದ್ರಗಳಿಗೆ ತಮ್ಮ ಕಿರಿಯ ವೈದ್ಯರ ಸೇವೆಯನ್ನು ನಿರಂತರವಾಗಿಯೂ, ಹಿರಿಯ ವೈದ್ಯರ ಸೇವೆಯನ್ನು ವಾರಕ್ಕೊಮ್ಮೆಯಾದರೂ ಒದಗಿಸುವಂತೆ ನಿರ್ಬಂಧಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಇಂತಹಾ ಎಲ್ಲಾ ನಿರ್ಬಂಧಗಳು ಕೇವಲ ಕಾಗದಗಳಲ್ಲಿ ಉಳಿಯದೆ ಜನರನ್ನು ತಲುಪುವಂತಾಗಲು ಕಠಿಣ ಕ್ರಮಗಳನ್ನು ಕೈಗೊಳ್ಳುವುದು ಅತ್ಯಗತ್ಯ.

ಹೀಗೆ ಈಗಿರುವ ವ್ಯವಸ್ಥೆಯಲ್ಲಿಯೇ ಸರಳವಾದ ಬದಲಾವಣೆಗಳನ್ನು ಮಾಡುವುದರ ಮೂಲಕ ಹಳ್ಳಿಗಳಲ್ಲಿ ಆರೋಗ್ಯ ಸೇವೆಯು ಲಭಿಸುವಂತೆ ಮಾಡಲು ಸಾಧ್ಯವಿದೆ. ಆದರೆ, ಹಳೆಯದ್ದನ್ನೇ ಬಳಸಿದರೆ ತಮಗೇನು ಲಾಭವೆನ್ನುವ ಯೋಚನೆಯಿಂದ ಹೊಸ ಯೋಜನೆಗಳನ್ನೇ ಮುಂದೊತ್ತುವುದು ಹಾಗೂ ಈಗಿರುವ ಯೋಜನೆಗಳು ಸಮರ್ಪಕವಾಗಿ ಜಾರಿಯಾಗುವಂತೆ ಮೇಲುಸ್ತುವಾರಿ ನೋಡಬೇಕಾದವರು ತಮ್ಮ ಕರ್ತವ್ಯದಿಂದ ವಿಮುಖರಾಗುವುದು ನಮ್ಮ ವ್ಯವಸ್ಥೆಯ ದುರವಸ್ಥೆಗೆ ಅತಿ ಮುಖ್ಯ ಕಾರಣಗಳಾಗಿವೆ. ಇರುವ ವ್ಯವಸ್ಥೆಯನ್ನೇ ಉತ್ತಮ ಪಡಿಸುವುದಕ್ಕಿರುವ ಸಕಲ ಅವಕಾಶಗಳನ್ನು ಬದಿಗೊತ್ತಿ, ತೀರಾ ಹೊಸದಾದುದನ್ನು ಮುಂದೊತ್ತುವುದರ ಹಿಂದೆ ಜನಪರ ಕಾಳಜಿಗಿಂತ ಕೆಲವರ ವೈಯಕ್ತಿಕ ಹಿತಾಸಕ್ತಿಗಳೇ ಹೆಚ್ಚು ಕೆಲಸ ಮಾಡುತ್ತಿವೆ ಎಂದೆನಿಸಿದರೆ ತಪ್ಪಲ್ಲ.