ಸನತ್ ಬೆಳಗಲಿ, ರಹಮತ್ ತರಿಕೆರೆ ಕಂಡಂತೆ

ವೈದ್ಯರೆಲ್ಲ ಕೆಟ್ಟವರಲ್ಲ; ಕೆಟ್ಟವರು ಇಲ್ಲವೆಂದಲ್ಲ

ಸನತ್ ಕುಮಾರ್ ಬೆಳಗಲಿ

ವಾರ್ತಾಭಾರತಿ : ಪ್ರಚಲಿತ :: ನವೆಂಬರ್ 20, 2017 [ಇಲ್ಲಿದೆ: http://www.varthabharati.in/article/prachalita/104745]

ವೈದ್ಯರ ಮುಷ್ಕರ ನಡೆದು ಕೊನೆಗೊಂಡ ಈ ದಿನಗಳಲ್ಲಿ ನನಗೆ 40 ವರ್ಷಗಳ ಹಿಂದಿನ 70ರ ದಶಕದ ಆ ದಿನಗಳು ನೆನಪಿಗೆ ಬಂದವು. ಆಗ ನಮ್ಮ ಕುಟುಂಬ ಬಿಜಾಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿತ್ತು. ನನ್ನ ಬದುಕಿನ ಎರಡು ದಶಕಗಳನ್ನು ಕಳೆದಿದ್ದು ಅದೇ ಊರಿನಲ್ಲಿ. ಬುದ್ಧನ ನಂತರ ನಮ್ಮ ಸಮಾಜಕ್ಕೆ ವೈಚಾರಿಕ ಚಿಕಿತ್ಸೆ ನೀಡಿದ ಬಸವಣ್ಣ ಜನಿಸಿದ ಊರು ಬಾಗೇವಾಡಿ. ಈ ಊರಿನಲ್ಲಿ ಆ ಕಾಲದಲ್ಲಿ ಬೆರಳೆಣಿಕೆಯಷ್ಟು ವೈದ್ಯರಿದ್ದರು. ನನಗೆ ನೆನಪಿರುವಂತೆ ನಮ್ಮ ಮನೆಯಿಂದ ಇಬ್ಬರು ವೈದ್ಯರ ಬಳಿ ಕರೆದೊಯ್ಯುತ್ತಿದ್ದರು. ಮೊದಲು ಆಯುರ್ವೇದ ವೈದ್ಯ ಡಾ.ಕಡಿವಾಳ ಅವರ ಬಳಿ ಕರೆದೊಯ್ಯತ್ತಿದ್ದರು. ಆಗ ಅವರ ಪರೀಕ್ಷಾ ಶುಲ್ಕ 2 ರೂಪಾಯಿ. ಅವರು ಕೊಡುವ ಔಷಧಿಗಳಿಗೆ ಕಾಯಿಲೆ ಕಡಿಮೆಯಾಗದಿದ್ದರೆ, ಅಲೋಪಥಿ ವೈದ್ಯ ಡಾ. ಅಹ್ಮದಿ ಅವರ ಬಳಿ ನಾವು ಚಿಕಿತ್ಸೆ ಪಡೆಯುತ್ತಿದ್ದೆವು. ಈ ಅಹ್ಮದಿ ಡಾಕ್ಟರ್ ಬಳಿ ಸಂಘ ಪರಿವಾರದವರು ಸೇರಿದಂತೆ ಊರಿನ ಎಲ್ಲಾ ಜನರು ಬಂದು ಚಿಕಿತ್ಸೆ ಪಡೆಯುತ್ತಿದ್ದರು. ಅವರು ಚಿಕಿತ್ಸೆಗೆ ನಿಗದಿಪಡಿಸಿದ ಶುಲ್ಕ 3 ರೂಪಾಯಿ.

ಕೆಮ್ಮು, ನೆಗಡಿ ಏನೇ ಕಾಯಿಲೆ ಬಂದರೂ ಮೊದಲು ಆಯುರ್ವೇದ ಡಾಕ್ಟರ್ ಕಡಿವಾಳ ಬಳಿ ಹೋಗುತ್ತಿದ್ದೆವು. ಅವರು ಮೊದಲು ಕೊಡುತ್ತಿದ್ದ ಔಷಧ ಹೊಟ್ಟೆ ಸಾಫ್ ಮಾಡುವ (ಭೇದಿ ಔಷಧಿ) ಪುಡಿ. ಇದರ ಜೊತೆಗೆ ಕೆಲ ವನಸ್ಪತಿ ಪುಡಿಗಳನ್ನು ಹಳೆಯ ಸುದ್ದಿಪತ್ರಿಕೆಗಳ ಚೀಟಿಯಲ್ಲಿ ಕಟ್ಟಿ ಕೊಡುತ್ತಿದ್ದರು. ಮಲಬದ್ಧತೆಯೇ ಎಲ್ಲಾ ಕಾಯಿಲೆಗೆ ಮೂಲ. ಮೊದಲು ಹೊಟ್ಟೆ ಕ್ಲೀನ್ ಆಗಬೇಕು ಎಂಬುದು ಅವರ ಸಿದ್ಧಾಂತ. ಅವರು ಕೊಡುವ ಔಷಧಿಗೆ ಕಾಯಿಲೆ ವಾಸಿಯಾಗದಿದ್ದರೆ, ಆಲೋಪಥಿ ಡಾಕ್ಟರ್ ಅಹ್ಮದಿ ಬಳಿ ಹೋಗುತ್ತಿದ್ದೆವು. ಅವರು ಇಂಜೆಕ್ಷನ್ ನೀಡಿ, ಗುಣಪಡಿಸುತ್ತಿದ್ದರು. ಇವರಿಬ್ಬರೂ ನಮ್ಮ ಕೈಯನ್ನು ಹಿಡಿದು, ನಾಡಿ ಪರೀಕ್ಷೆ ಮಾಡಿ ಯಾವ ಕಾಯಿಲೆ ಇದೆ ಎಂಬುದನ್ನು ಪತ್ತೆ ಹಚ್ಚುತ್ತಿದ್ದರು. ಈಗಿನಂತೆ ಆಗ ಪರೀಕ್ಷಾ ಪ್ರಯೋಗಾಲಯಗಳು ಇರಲಿಲ್ಲ. ಜಿಲ್ಲಾ ಕೇಂದ್ರವಾದ ಬಿಜಾಪುರದಲ್ಲೂ ಪ್ರಯೋಗಾಲಯಗಳು ಇರಲಿಲ್ಲ.

ಈ ಇಬ್ಬರು ಡಾಕ್ಟರ್ ಬಳಿ ಕಾಯಿಲೆ ವಾಸಿಯಾಗದಿದ್ದರೆ, ಜಿಲ್ಲಾ ಕೇಂದ್ರವಾದ ಬಿಜಾಪುರಕ್ಕೆ ಹೋಗುತ್ತಿದ್ದೆವು. ಆ ಕಾಲದಲ್ಲಿ ಈಗಿನಂತ ನರ್ಸಿಂಗ್ ಹೋಮ್‌ಗಳು ಇರಲಿಲ್ಲ. ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳು ಇರಲಿಲ್ಲ. ಒಂದೆರಡು ಆಸ್ಪತ್ರೆಗಳಿದ್ದರೂ ಅಲ್ಲಿ ಕಾಯಿಲೆ ಗುಣವಾಗದವರು ಹೋಗುತ್ತಿದ್ದರು. ಇನ್ನು ವಿದೇಶದಿಂದ ಓದಿ ಬಂದ ಡಾ. ಪನ್ಸಾಳಕರ ಎಂಬ ವೈದ್ಯರಿದ್ದರು. ಅವರು ಕೂಡ ಕೈ ಹಿಡಿದು, ನಾಡಿ ಪರೀಕ್ಷಿಸಿ, ಒಮ್ಮಾಮ್ಮೆ ಸ್ಟೆಥೋಸ್ಕೋಪ್ ಬಳಸಿ ರೋಗ ಪತ್ತೆ ಮಾಡುತ್ತಿದ್ದರು. ಅವರ ಔಷಧಿಗೂ ಕಡಿಮೆಯಾಗದಿದ್ದರೆ, ನಮ್ಮ ಜಿಲ್ಲೆ ಪಕ್ಕದ ಮಹಾರಾಷ್ಟ್ರದ ಮೀರಜ್ ಇಲ್ಲವೇ ಸೊಲ್ಲಾಪುರಕ್ಕೆ ಹೋಗುತ್ತಿದ್ದೆವು. ಅಲ್ಲಿ ಒಳ್ಳೆಯ ಆಸ್ಪತ್ರೆಗಳಿದ್ದವು.

ಈ ನೆನಪುಗಳೆಲ್ಲ ಏಕೆ ಬಂದವೆಂದರೆ, 70ರ ದಶಕದಲ್ಲಿ ವೈದ್ಯರ ಬಳಿ ಹೋದರೆ, ಅವರು ಯಾವ ಪರೀಕ್ಷೆಗೂ ಬರೆದುಕೊಡದೇ, ನಾಡಿ ಪರೀಕ್ಷೆ ಮಾಡಿ ಔಷಧಿ ಕೊಡು ತ್ತಿದ್ದರು. ಆದರೆ 80ರ ದಶಕದ ನಂತರ ಜಾಗತೀಕರಣದ ಶಕೆ ಆರಂಭವಾದಾಗ, ವೈದ್ಯಕೀಯ ವೃತ್ತಿ ಕೂಡ ಮಾರುಕಟ್ಟೆ ಮೌಲ್ಯ ಪಡೆಯಿತು. ವೈದ್ಯಕೀಯ ವೃತ್ತಿಯು ಆಧುನಿಕ ಸ್ವರೂಪ ಪಡೆಯಿತು. ಈಗ ಅದೇ ಬಿಜಾಪುರದಲ್ಲಿ ಎರು ಮೆಡಿಕಲ್ ಕಾಲೇಜುಗಳಿವೆ. ಊರು ತುಂಬಾ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳಿವೆ. ಯಾವುದೇ ಡಾಕ್ಟರ್ ಬಳಿ ಹೋದರೂ ಯಾರು ಸಹ ಕೈ ಮುಟ್ಟಿ ನೋಡುವುದಿಲ್ಲ. ಇಂತಹ ಪರೀಕ್ಷೆ ಮಾಡಿಕೊಂಡು ಬನ್ನಿ ಎಂದು ಲ್ಯಾಬೋರೆಟರಿಗೆ ಚೀಟಿ ಬರೆದುಕೊಡುತ್ತಾರೆ. ಅವೆಲ್ಲ ಪರೀಕ್ಷೆ ಮಾಡಿಕೊಂಡು ಬರಬೇಕೆಂದರೆ, ಬರೀ ಕೆಮ್ಮು, ನೆಗಡಿ, ಜ್ವರಕ್ಕೆ ಒಂದೆರಡು ಸಾವಿರ ರೂಪಾಯಿ ಖರ್ಚು ಆಗುತ್ತದೆ.

ಇನ್ನು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಒಳರೋಗಿಯಾಗಿ ಸೇರಿದರೆ, 8 ದಿನವಿದ್ದು ಹೊರಬಂದರೆ 60 ಸಾವಿರ ರೂಪಾಯಿವರೆಗೆ ಖರ್ಚಾಗುತ್ತದೆ. ಇದೇಕೆ ಹೀಗೆ ಅಂದ್ರೆ, ಕಾಲ ಬದಲಾಗಿದೆ ಎಂಬ ಉತ್ತರವನ್ನು ನಾವೇ ಕಂಡುಕೊಳ್ಳಬೇಕಿದೆ. ಒಂದು ಮೆಡಿಕಲ್ ಸೀಟಿಗೆ ಒಂದು ಕೋಟಿ ರೂಪಾಯಿ ಕ್ಯಾಪಿಟೇಷನ್ ಫೀಸ್ ಕಟ್ಟಬೇಕು. ಇದರ ಜೊತೆಗೆ ನಾನಾ ಶುಲ್ಕಗಳ ರೂಪದಲ್ಲಿ ಲಕ್ಷಾಂತರ ರೂಪಾಯಿ ಕೈ ಬಿಟ್ಟು ಹೋಗುತ್ತದೆ. ಇನ್ನು ಎಂ.ಡಿ ಅಥವಾ ಎಂ.ಎಸ್ ಪದವಿ ಪಡೆಯಬೇಕಿದ್ದರೆ, 4 ಕೋಟಿ ರೂಪಾಯಿ ವ್ಯಯಿಸಬೇಕು. ಇಷ್ಟೆಲ್ಲ ಡಿಗ್ರಿ ಪಡೆದ ನಂತರ ದುಡ್ಡಿದ್ದರೆ, 5-6 ಕೋಟಿ ರೂಪಾಯಿ ಖರ್ಚು ಮಾಡಿ, ಸ್ವಂತ ನರ್ಸಿಂಗ್ ಹೋಂ ಮಾಡಬಹುದು. ಇಲ್ಲವೇ ಇನ್ನೊಬ್ಬರ ಆಸ್ಪತ್ರೆಯಲ್ಲಿ ನೌಕರಿ ಮಾಡಬಹುದು.

ಇದರ ನಡುವೆ ಈಗಲೂ ಕೆಲ ವೈದ್ಯರು ಇದ್ದಾರೆ. ಅವರು ಯಾವುದೇ ಪರೀಕ್ಷೆಗೆ ಬರೆದುಕೊಡುವುದಿಲ್ಲ. ಅತ್ಯಂತ ಕಡಿಮೆ ಶುಲ್ಕ ಪಡೆಯುವ ಇವರ ಬಳಿ ಬಡವರು ಹೋಗುತ್ತಾರೆ. ಬಿಜಾಪುರ ಜಿಲ್ಲೆ ಮುದ್ದೇಬಿಹಾಳದಲ್ಲಿ 92 ವಯಸ್ಸಿನ ವೈದ್ಯರೊಬ್ಬರು ಕೇವಲ 10 ರೂಪಾಯಿ ಶುಲ್ಕ ಪಡೆದು, ತಮ್ಮ ಬಳಿ ಬರುವ ರೋಗಿಗಳನ್ನು ಗುಣಪಡಿಸಿ ಕಳುಹಿಸುತ್ತಾರೆ. ಮಂಡ್ಯದಲ್ಲಿ ಡಾ. ಶಂಕರಗೌಡ ಅವರು ಕೇವಲ 5 ರೂಪಾಯಿ ಶುಲ್ಕ ಪಡೆದು, ಚಿಕಿತ್ಸೆ ನೀಡುತ್ತಾರೆ. ಈ ವ್ಯಾಪಾರಿ ಜಗತ್ತಿನಲ್ಲಿ ಇಂಥವರೂ ಇದ್ದಾರೆ.

ಇಂದಿನ ತಲೆಮಾರಿನಲ್ಲೂ ಲಾಭದ ದುರಾಸೆಯಿಲ್ಲದೆ ತಮ್ಮ ಬಳಿ ಬರುವ ರೋಗಿಗಳನ್ನು ಅತ್ಯಂತ ಪ್ರೀತಿಯಿಂದ ಕಾಣುವ ವೈದ್ಯರೂ ಇದ್ದಾರೆ. ಮಂಗಳೂರಿನ ಡಾ. ಶ್ರೀನಿವಾಸ ಕಕ್ಕಿಲ್ಲಾಯ, ಧಾರವಾಡದ ಡಾ. ಸಂಜೀವ ಕುಲಕರ್ಣಿ, ಹೊನ್ನಾವರ ತಾಲೂಕಿನ ಕಾಡಿನಂಚಿನಲ್ಲಿರುವ ಡಾ. ಎಚ್.ಎಸ್.ಅನುಪಮಾ ಮತ್ತು ಡಾ. ಕೃಷ್ಣ. ದಾವಣಗೆರೆಯ ಡಾ. ವಸುಧೇಂದ್ರ. ಇಂಥ ಅನೇಕ ವೈದ್ಯರು ಈ ಕಾಲದಲ್ಲೂ ಕಡಿಮೆ ಶುಲ್ಕ ಪಡೆದು ಚಿಕಿತ್ಸೆ ನೀಡುತ್ತಿದ್ದಾರೆ.

ವೈದ್ಯಕೀಯ ವಿಜ್ಞಾನದ ಆಧುನಿಕ ತಂತ್ರಜ್ಞಾನ ಪ್ರಯೋಜನವನ್ನು ಪಡೆಯ ಬಾರದೆಂದು ನಾನು ಹೇಳುವುದಿಲ್ಲ. ಈ ಎಲ್ಲಾ ಸೌಲಭ್ಯಗಳನ್ನು ಪಡೆದು, ರೋಗಿಗಳನ್ನು ಗುಣಪಡಿಸಲೇಬೇಕು. ಕಕ್ಕಿಲ್ಲಾಯ ಮತ್ತು ಅನುಪಮಾರಂಥ ವೈದ್ಯರು ಅನಿವಾರ್ಯ ಎನ್ನಿಸಿದ್ದಲ್ಲಿ ಮಾತ್ರವೇ ರೋಗಿಗಳಿಗೆ ಪರೀಕ್ಷೆಗೆ ಬರೆದು ಕೊಡುತ್ತಾರೆ. ಆದರೆ ಕೆಲ ವೈದ್ಯರು ದುಬಾರಿ ಪರೀಕ್ಷೆಗಳಿಗೆ ರೋಗಿಗಳನ್ನು ಗುರಿ ಪಡಿಸಿ, ಜೇಬು ಖಾಲಿ ಮಾಡಿಸು ತ್ತಾರೆ. ಮೊದಲೇ ಸೋತು ಸಣ್ಣವಾದ ರೋಗಿಗಳು ಈ ದುಬಾರಿ ವೆಚ್ಚದಿಂದ ಬಳಲಿ ಬೆಂಡಾ ಗುತ್ತಾರೆ. ಇದನ್ನು ಕಂಡು ಆರೋಗ್ಯ ಸಚಿವ ರಮೇಶಕುಮಾರ್ ಕೆಂಡಾಮಂಡಲ ಗೊಂಡು ಕೆಪಿಎಂಇ ಕಾಯ್ದೆ ತಂದು ವೈದ್ಯರಿಗೆ ಕಡಿವಾಣ ಹಾಕಲು ಹೊರಟರು.

ಈ ತಿದ್ದುಪಡಿ ಮಸೂದೆಯನ್ನು ಇನ್ನೂ ಸದನದಲ್ಲಿ ಮಂಡಿಸಿಲ್ಲ. ಆದರೆ ಕರ್ನಾ ಟಕದ ಕೆಲ ಖಾಸಗಿ ವೈದ್ಯರು ಮುಷ್ಕರ ನಡೆಸಿದರು. ಇದರ ಪರಿಣಾಮ 30 ಮಂದಿ ಅಸುನೀಗಿದರು. ಆದರೆ ಹೈಕೋರ್ಟ್ ಮುಷ್ಕರ ನಿಲ್ಲಿಸುವಂತೆ ಆದೇಶಿಸಿದ್ದರಿಂದ ಮತ್ತು ಮುಖ್ಯಮಂತ್ರಿಗಳು ಸಭೆ ನಡೆದು ಮಾತುಕತೆ ನಡೆಸಿದ ಪರಿಣಾಮವಾಗಿ ವೈದ್ಯರು ಮುಷ್ಕರ ನಿಲ್ಲಿಸಬೇಕಾಯಿತು.

ಖಾಸಗಿ ವೈದ್ಯರನ್ನು ಮಣಿಸಲು ತಂದ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ ಕಾಯ್ದೆಗೆ ಡಾ. ಶ್ರೀನಿವಾಸ ಕಕ್ಕಿಲ್ಲಾಯರಂತಹ ವೈದ್ಯರು ವಿರೋಧ ವ್ಯಕ್ತಪಡಿ ಸಿದರು. ಈ ಕಾಯ್ದೆ ಮೇಲ್ನೋಟಕ್ಕೆ ಬಡವರ ಪರ ಇದ್ದರೂ ಕೂಡ ಸಣ್ಣಪುಟ್ಟ ನಗರಗಳಲ್ಲಿ ದವಾಖಾನೆಯನ್ನು ತೆರೆದು, ಆಸ್ಪತ್ರೆಗಳನ್ನು ಆರಂಭಿಸಿ, ರೋಗಿಗಳ ಕಾಯಿಲೆ ಗುಣಪಡಿಸುವಂತಹ ವೈದ್ಯರಿಗೆ ಇದರಿಂದ ತೊಂದರೆ ಆಗುತ್ತದೆ. ಇದು ಬಹುದೊಡ್ಡ ಕಾರ್ಪೊರೇಟ್ ಆಸ್ಪತ್ರೆಗಳಿಗೆ ಮಾತ್ರ ಉಪಯುಕ್ತ. ಈ ಕಾಯ್ದೆ ಜಾರಿಗೆ ತರುವ ಮುನ್ನ ಸರಕಾರಿ ಆಸ್ಪತ್ರೆಗಳನ್ನು ಬಲಪಡಿಸಿ ಎಂದು ಅವರು ಹೇಳುತ್ತಾರೆ.

ಇದಕ್ಕೆ ಪ್ರತಿಯಾಗಿ ಕರ್ನಾಟಕ ಜನಾರೋಗ್ಯದಂತಹ ಸಂಘಟನೆಗಳು ಹಿಂದುಳಿದ ಪ್ರದೇಶಗಳಲ್ಲಿ ಖಾಸಗಿ ಆಸ್ಪತ್ರೆಗಳು ನಡೆಸುವ ಪಾತಕಗಳ ಚರಿತ್ರೆಯನ್ನೇ ಬಿಚ್ಚಿಡುತ್ತವೆ. ಹೈದರಾಬಾದ್ ಕರ್ನಾಟಕದಂತಹ ಪ್ರದೇಶದಲ್ಲಿ ಹೊಟ್ಟೆ ನೋವು ಎಂದು ಬರುವ ಗ್ರಾಮೀಣ ಪ್ರದೇಶದ ಹೆಣ್ಣುಮಕ್ಕಳ ಗರ್ಭಕೋಶವನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆದು ಹಾಕುತ್ತಾರೆ. ಕೆಲವು ಕಡೆ ಹೆಣವನ್ನು ಆಸ್ಪತ್ರೆಯಲ್ಲಿ ಇಟ್ಟುಕೊಂಡು ದುಬಾರಿ ಶುಲ್ಕ ಕಟ್ಟಿದರೆ ಮಾತ್ರ ಹೆಣ ಕೊಡುವುದಾಗಿ ರೋಗಿಗಳನ್ನು ಸತಾಯಿಸುತ್ತಾರೆಂದು ಜನಾರೋಗ್ಯ ಸಂಘಟನೆಯ ಅಖಿಲಾ ವಾಸನ್ ಮತ್ತು ವಿಜಯಕುಮಾರ್ ಸೀತಪ್ಪ ಅವರ ವಾದ.

ಇದನ್ನೆಲ್ಲ ಅವಲೋಕಿಸಿ, ಆರೋಗ್ಯ ಸಚಿವ ರಮೇಶ ಕುಮಾರ್ ಕೆಪಿಎಂಇ ಕಾಯ್ದೆಗೆ ತಿದ್ದುಪಡಿ ತರಲು ಮುಂದಾದರು. ರಮೇಶ ಕುಮಾರ್ ಅವರನ್ನು ನನಗೆ ನಾಲ್ಕು ದಶಕಗಳಿಂದ ಗೊತ್ತು. ಅವರ ಜನಪರ ಕಾಳಜಿ ಪ್ರಶ್ನಾತೀತ. ಅವರ ಭಾಷೆ ಸ್ವಲ್ಪ ಒರಟಾದರೂ ತುಂಬಾ ಮೃದು ಹೃದಯದ ವ್ಯಕ್ತಿ. ಈ ಕೆಪಿಎಂಇ ಕಾಯ್ದೆಯ ತಿದ್ದುಪಡಿ ಮಸೂದೆ ಯನ್ನು ಬೆಳಗಾವಿ ವಿಧಾನಸಭೆ ಅಧಿವೇಶನದಲ್ಲಿ ಮಂಡಿಸಲು ಮುಂದಾದಾಗ, ಈಶ್ವರಪ್ಪರಂತಹ ಕೆಲ ಬಿಜೆಪಿ ಸದಸ್ಯರು ತುಂಬಾ ಹಗುರವಾಗಿ ಮಾತನಾಡಿದರು. ಇದರಿಂದ ಕೆರಳಿದ ರಮೇಶ ಕುಮಾರ್ ವಿಧೇಯಕ ಮಂಡನೆಯಾಗದಿದ್ದರೆ, ರಾಜೀನಾಮೆ ಕೊಡುವ ಬೆದರಿಕೆ ಹಾಕಿದರೆಂದು ತಿಳಿದು ಬಂದಿದೆ. ಈ ಸಂದರ್ಭ ದಲ್ಲಿ ಸದನದಲ್ಲಿ ಮಾತನಾಡಿದ ಅವರು, ಬಲ ಎಂದರೆ ಬಲಿಷ್ಠರು, ಎಡ ಎಂದರೆ ನಿರ್ಗತಿಕರು. ಪ್ರಸಂಗ ಬಂದರೆ, ನಾನು ಮತ್ತು ನಮ್ಮ ನಾಯಕರು ಎಡದತ್ತ ವಾಲುತ್ತೇವೆ ಹೊರತು ಬಲದತ್ತ ಅಲ್ಲ ಎಂದು ಸದನದಲ್ಲಿ ಘೋಷಿಸಿದರು.

ಹಣದಾಹಿ ವೈದ್ಯರಿಗೆ ಕಡಿವಾಣ ಹಾಕಲು 2007ರಲ್ಲೇ ಜಾರಿಗೆ ಬಂದ ಕೆಪಿಎಂಇ ಕಾನೂನಿನ ಪರಿಣಾಮವಾಗಿ ಹಳ್ಳಿಯ ಬಡವರ ಮಧ್ಯೆ ಕೆಲಸ ಮಾಡಬೇಕೆಂದು ಕವಲಕ್ಕಿಗೆ ಹೋಗಿ, ಹೆರಿಗೆ ಆಸ್ಪತ್ರೆ ಮಾಡಿದ್ದ ಡಾ.ಅನುಪಮಾ ಅವರು ತಮ್ಮ ಆಸ್ಪತ್ರೆ ಯನ್ನು ಮುಚ್ಚಬೇಕಾಯಿತು. ಯಾಕೆಂದರೆ, ಈ ಕಾನೂನು ಮೇಲ್ನೋಟಕ್ಕೆ ಜನಪರ ವಾಗಿದ್ದರೂ ಕೂಡ ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿ ತೂಗುವುದರಿಂದ ಬಡವರ ಪಾಲಿಗೆ ಯಮಪಾಶವಾಗಿದೆ. ಆರ್‌ಟಿಇ ಕಾಯ್ದೆಯಂತೆ ಈ ಕಾಯ್ದೆಯು ದುರುಪಯೋಗ ಆಗುವ ಸೂಚನೆಗಳಿವೆ. ಬ್ಲಾಕ್‌ಮೇಲ್ ಮಾಡುವವರಿಗೆ ಇದು ಅಸ್ತ್ರವಾಗುತ್ತದೆಯೆಂದು ಇದನ್ನು ವಿರೋಧಿಸುವವರ ವಾದವಾಗಿದೆ.

ಈ ಕಾನೂನಿನ ಎರಡು ವಿರುದ್ಧ ಧ್ರುವಗಳಲ್ಲಿ ಇರುವ ರಮೇಶ ಕುಮಾರ ಮತ್ತು ಶ್ರೀನಿವಾಸ ಕಕ್ಕಿಲ್ಲಾಯ ಇಬ್ಬರೂ ನನಗೆ ಗೊತ್ತು. ಇಬ್ಬರ ಸಾಮಾಜಿಕ ಕಾಳಜಿ ಪ್ರಶ್ನಾತೀತ.ಬಡವರನ್ನು ಸುಲಿಗೆ ಮಾಡುವ ಖಾಸಗಿ ಆಸ್ಪತ್ರೆಗಳಿಗೆ ಕಡಿವಾಣ ಹಾಕಲೇಬೇಕು ಎಂಬುದು ರಮೇಶಕುಮಾರ್ ಅವರ ಹಠ. ಈ ಕಾನೂನು ದುರುಪಯೋಗ ಆಗುತ್ತದೆ ಮತ್ತು ಇದರಿಂದ ಕಾರ್ಪೊರೇಟ್ ಆಸ್ಪತ್ರೆಗಳಿಗೆ ಉಪಯೋಗ ಆಗುತ್ತದೆ ಎಂಬುದು ಶ್ರೀನಿವಾಸ ಕಕ್ಕಿಲ್ಲಾಯ ಅವರ ಅಭಿಪ್ರಾಯ. ಈ ಎರಡರಲ್ಲೂ ಸತ್ಯಾಂಶವಿದೆ. ವೈದ್ಯರು ಕೂಡ ಇದೇ ಸಮಾಜದಿಂದ ಬಂದವರು. ಈ ಸಮಾಜದಲ್ಲಿರುವ ಒಳ್ಳೆಯವರು ಮತ್ತು ಕೆಟ್ಟವರು ವೈದ್ಯ ಸಮುದಾಯದಲ್ಲೂ ಇದ್ದಾರೆ. ಡಾ. ಕಕ್ಕಿಲ್ಲಾಯ ಮತ್ತು ಅನುಪಮಾ ಅಂಥವರು ಏನನ್ನೂ ಆಶಿಸದೇ ಬಡವರ ಸೇವೆಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದರೆ, ಇನ್ನು ಅನೇಕ ವೈದ್ಯರು ತಮ್ಮ ಆಸ್ಪತ್ರೆಗಳ ಐಸಿಯುನಲ್ಲಿ ಹೆಣ ಇಟ್ಟುಕೊಂಡು ಹಣ ವಸೂಲಿ ಮಾಡುತ್ತಾರೆ.

ಎರಡು ತಿಂಗಳ ಹಿಂದೆ ನಾನು ಬಿಜಾಪುರಕ್ಕೆ ಹೋದಾಗ, ನನ್ನ ಪರಿಚಯದ ಡಾ. ಅಗರ್‌ವಾಲ ಬಳಿ ಚಿಕಿತ್ಸೆಗೆಂದು ಹೋದೆ. ಮಧುಮೇಹದಿಂದ ಬಳಲುತ್ತಿರುವ ನನ್ನ ರಕ್ತದ ಸ್ಯಾಂಪಲ್‌ನ್ನು ಪರೀಕ್ಷಿಸಿದಾಗ, ನನಗೆ ಸಕ್ಕರೆ ಪ್ರಮಾಣ 501 ದಾಟಿತ್ತು. ಆಗ ಅವರು ತಕ್ಷಣವೇ ಆಸ್ಪತ್ರೆಯಲ್ಲಿ ದಾಖಲಿಸಿಕೊಂಡು ಚಿಕಿತ್ಸೆ ನೀಡಿದರು. ಕಿಡ್ನಿಗೆ ತೊಂದರೆ ಉಂಟಾಗಿದ್ದರಿಂದ ಸಕ್ಕರೆ ಪ್ರಮಾಣ ಹೆಚ್ಚಾಗಿತ್ತು. ಅದಕ್ಕಾಗಿ ಲೇಸರ್ ಸರ್ಜರಿಯನ್ನು ಮಾಡಿದರು. ನಾನು ಒಂದು ವಾರ ಅಲ್ಲಿದ್ದು, ಬಿಡುಗಡೆಯಾಗಿ ಬರುವಾಗ ಅವರು ಚಿಕಿತ್ಸೆಗೆ ನಿಗದಿಪಡಿಸಿದ್ದ ಹಣ ಕಟ್ಟಬೇಕಾಯಿತು. ಅವರು ತುಂಬಾ ಚೆನ್ನಾಗಿ ನೋಡಿ ಕೊಂಡಿದ್ದರಿಂದ ಕಟ್ಟಿದ ಹಣ ದುಬಾರಿ ಅನ್ನಿಸಲಿಲ್ಲ. ಈ ಡಾ. ಅಗರ್‌ವಾಲ್ ವೈದ್ಯರ ಮುಷ್ಕರ ನಡೆದ ಸಂದರ್ಭದಲ್ಲಿ ನನಗೆ ಫೋನ್ ಮಾಡಿ, ಆರೋಗ್ಯ ಸಚಿವರು ನಮ್ಮನ್ನು ದರೋಡೆಕೋರರು ಎಂದು ಕರೆಯುತ್ತಿದ್ದಾರೆ. ಇದರಿಂದ ತುಂಬಾ ನೋವಾಗಿದೆ. ರೋಗಿಗಳ ಸೇವೆಗೆಂದೇ ಆಸ್ಪತ್ರೆ ನಿರ್ಮಿಸಿದ್ದೇನೆ ಹೊರತು ಲಾಭ ಗಳಿಸುವ ಉದ್ದೇಶವಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಬಿಜಾಪುರದಂತಹ ಹಿಂದುಳಿದ ಪ್ರದೇಶದಲ್ಲಿ ಅಗರವಾಲ್ ಅಂಥವರು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಮಾಡಿದ್ದಾರೆ. ತಮ್ಮ ಬಳಿ ಬಂದ ರೋಗಿಗಳನ್ನು ಬಡವರು, ಶ್ರೀಮಂತರು ಇರಲಿ ಪ್ರೀತಿಯಿಂದ ಮಾತನಾಡುತ್ತಾರೆ. ಚಿಕಿತ್ಸೆಗೆ ಅವರು ನಿಗದಿಪಡಿಸಿದ ಶುಲ್ಕ ದುಬಾರಿ ಅನ್ನಿಸಿದರೂ ಅವರ ಆಸ್ಪತ್ರೆಗೆ ಹೋಗಿ ಬರುವ ರೋಗಿಗಳು ಗುಣಮುಖರಾಗುತ್ತಾರೆ ಎಂಬ ಭಾವನೆ ಆ ಜಿಲ್ಲೆಯಲ್ಲಿದೆ. ಇಂಥವರನ್ನು ತೀರ ದರೋಡೆಕೋರರು ಎಂದು ಕರೆಯಲು ನನಗೂ ಮನಸ್ಸು ಆಗುತ್ತಿಲ್ಲ.

ಖಾಸಗಿ ವೈದ್ಯರನ್ನು ನಿಯಂತ್ರಿಸಲು ಈಗ ಸಾಕಷ್ಟು ಕಾನೂನುಗಳಿವೆ. ಆ ಯಾವ ಕಾನೂನುಗಳು ಜಾರಿಗೆ ಬಂದಿಲ್ಲ. ಆ ಕಾನೂನುಗಳನ್ನು ಬಳಸಿಕೊಂಡು ವೈದ್ಯರಿಂದ ಸೇವೆ ಪಡೆಯುವ ಜಾಗೃತಿ ಜನರಲ್ಲಿ ಉಂಟಾಗಿಲ್ಲ. ಹೀಗಾಗಿ ನೀವು ಇನ್ನೊಂದು ಹೊಸ ಕಾನೂನು ತಂದರೂ ಅದರ ಹೆಚ್ಚಿನ ಉಪಯೋಗ ಆಗುವುದಿಲ್ಲ ಎಂಬ ವಾದದಲ್ಲೂ ಹುರುಳಿಲ್ಲ.

ಸಮಾಜವಾದಿ ಸೋವಿಯತ್ ರಶ್ಯವಿದ್ದಾಗ, ಅಲ್ಲಿ ಎಲ್ಲ ರೋಗಿಗಳಿಗೂ ಉಚಿತ ಚಿಕಿತ್ಸೆಯಿತ್ತು. ಹೃದಯ ಶಸ್ತ್ರಚಿಕಿತ್ಸೆಗೂ ರೋಗಿಗಳು ಶುಲ್ಕ ಕಟ್ಟಬೇಕಿರಲಿಲ್ಲ. ಈಗ ಸಮಾಜವಾದ ಉಳಿದುಕೊಂಡಿರುವ ಕ್ಯೂಬಾದಲ್ಲಿ ಅತ್ಯಂತ ಕಡಿಮೆ ದರದಲ್ಲಿ ನಾನಾ ಕಾಯಿಲೆಗಳನ್ನು ಗುಣಪಡಿಸುವ ಆಸ್ಪತ್ರೆಗಳಿವೆ. ಕೇವಲ 10 ಸಾವಿರ ರೂಪಾಯಿಯಲ್ಲಿ ಅಲ್ಲಿ ಹೃದಯ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ. ಅಂತಲೇ ಕ್ಯೂಬಾದ ಕಡು ವೈರಿಯಾದ ಅಮೆರಿಕದ ಪ್ರಜೆಗಳು ಕೂಡ ಕಾಯಿಲೆ ಉಲ್ಬಣಿಸಿದರೆ, ಕ್ಯೂಬಾಗೆ ಧಾವಿಸಿ ಬರುತ್ತಾರೆ. ವೈದ್ಯಕೀಯ ಎಂಬುದು ಅಲ್ಲಿ ಸೇವೆ ಆಗಿದೆ. ವ್ಯಾಪಾರವಾಗಿಲ್ಲ.

ಆದರೆ ನವ ಉದಾರವಾದಿ ಆರ್ಥಿಕ ನೀತಿ ಒಪ್ಪಿಕೊಂಡಿರುವ ಭಾರತದಲ್ಲಿ ವೈದ್ಯಕೀಯ ಸೇವೆ ಎಂಬುದು ಹಣ ಗಳಿಸುವ ವ್ಯಾಪಾರವಾಗಿ ಮೂರು ದಶಕಗಳು ಕಳೆದಿವೆ. ಈ ವ್ಯವಸ್ಥೆ ತನ್ನ ಲೋಪವನ್ನು ಮುಚ್ಚಿಕೊಳ್ಳಲು ಎಷ್ಟೇ ಜನಪರ ಕಾನೂನುಗಳನ್ನು ತಂದರೂ ಹೆಚ್ಚಿನ ಪ್ರಯೋಜನ ಆಗುವುದಿಲ್ಲ. ಇದಕ್ಕೆ ಬದಲಾಗಿ, ಸಾರ್ವಜನಿಕ ಆರೋಗ್ಯ ಸೇವೆಯನ್ನು ಬಲಪಡಿಸಬೇಕಿದೆ. ಮುಂಚೆ ಶೇ 70ರಷ್ಟು ಜನರು ಸರಕಾರಿ ಆಸ್ಪತ್ರೆ ಅವಲಂಬಿಸಿದ್ದರು. ಈಗ ತದ್ವಿರುದ್ಧವಾಗಿ ಶೇ 90ರಷ್ಟು ಜನ ಖಾಸಗಿ ಆಸ್ಪತ್ರೆಗಳಿಗೆ ಮೊರೆ ಹೋಗಿದ್ದಾರೆ. ಸರಕಾರಿ ಆಸ್ಪತ್ರೆಗೆ ಜನ ಬರುವುದಿಲ್ಲವೆಂದಲ್ಲ. ಈಗಲೂ ಯಾವುದೇ ಊರಿನ ಸರಕಾರಿ ಆಸ್ಪತ್ರೆಗೆ ಹೋದರೆ, ಆ ಆಸ್ಪತ್ರೆಗಳು ಜನರಿಂದ ತುಂಬಿ ತುಳುಕಿರುತ್ತವೆ.

ಆದರೆ ಅದಕ್ಕೆ ತಕ್ಕ ಸೌಕರ್ಯಗಳು ಅಲ್ಲಿಲ್ಲ. ಅನೇಕ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆಯಿದೆ. ಇನ್ನೂ ಅನೇಕ ಸರಕಾರಿ ಆಸ್ಪತ್ರೆಗಳಲ್ಲಿ ಸಂಬಳಕ್ಕಾಗಿ ಇಲ್ಲಿ ಕೆಲಸ ಮಾಡಿ, ಹೆಚ್ಚಿನ ಸಂಬಳಕ್ಕಾಗಿ ಕೆಲ ಹೊತ್ತು ಖಾಸಗಿ ಆಸ್ಪತ್ರೆಗಳಿಗೆ ಹೋಗಿ ದುಡಿಯುತ್ತಾರೆ. ಅನೇಕ ಸರಕಾರಿ ಆಸ್ಪತ್ರೆಗಳು ಆಧುನಿಕ ತಂತ್ರಜ್ಞಾನದ ಕೊರತೆಯಿಂದ ಬಳಲುತ್ತಿವೆ. ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಸಿಟಿ ಸ್ಕಾನ್ ಮತ್ತು ಡಯಾಲಿಸಿಸ್ ಸೌಲಭ್ಯಗಳನ್ನು ಡಿ.1ರೊಳಗೆ ಅಳವಡಿಸುವುದಾಗಿ ಆರೋಗ್ಯ ಸಚಿವರು ಹೇಳಿದ್ದಾರೆ. ಇದು ಸ್ವಾಗತಾರ್ಹ ಕ್ರಮ. ಸರಕಾರಿ ಆಸ್ಪತ್ರೆಗಳನ್ನು ಬಲ ಪಡಿಸಿ, ಖಾಸಗಿ ಆಸ್ಪತ್ರೆಗಳಿಗೆ, ಅನಿವಾರ್ಯವಾಗಿ ಹೋಗುವ ಜನರ ನೋವು ಮತ್ತು ಸಂಕಟಗಳಿಗೆ ಸ್ಪಂದಿಸಿದರೆ ಎಷ್ಟೋ ಪ್ರಯೋಜನವಾಗುತ್ತದೆ. ಇವತ್ತಿನ ನವ ಉದಾರವಾದಿ ಆರ್ಥಿಕ ನೀತಿಯನ್ನು ಇಟ್ಟುಕೊಂಡು ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಣಕ್ಕೆ ಒಳಪಡಿಸುವ ಸರಕಾರದ ಪ್ರಯತ್ನ ಸ್ವಾಗತಾರ್ಹವಾದರೂ ಅದೊಂದೆ ಸಮಸ್ಯೆಗೆ ಪರಿಹಾರವಲ್ಲ ಎಂಬುದು ಮನಗಾಣಬೇಕಿದೆ.

ಬಿಜಾಪುರದಂತಹ ಹಿಂದುಳಿದ ಪ್ರದೇಶದಲ್ಲಿ ಅಗರ್‌ವಾಲ್ ಅಂಥವರು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಮಾಡಿದ್ದಾರೆ. ತಮ್ಮ ಬಳಿ ಬಂದ ರೋಗಿಗಳನ್ನು ಬಡವರಿರಲಿ, ಶ್ರೀಮಂತರಿರಲಿ ಪ್ರೀತಿಯಿಂದ ಮಾತನಾಡುತ್ತಾರೆ. ಚಿಕಿತ್ಸೆಗೆ ಅವರು ನಿಗದಿಪಡಿಸಿದ ಶುಲ್ಕ ದುಬಾರಿ ಅನ್ನಿಸಿದರೂ ಅವರ ಆಸ್ಪತ್ರೆಗೆ ಹೋಗಿ ಬರುವ ರೋಗಿಗಳು ಗುಣಮುಖರಾಗುತ್ತಾರೆ ಎಂಬ ಭಾವನೆ ಆ ಜಿಲ್ಲೆಯಲ್ಲಿದೆ. ಇಂಥವರನ್ನು ತೀರ ದರೋಡೆಕೋರರು ಎಂದು ಕರೆಯಲು ನನಗೂ ಮನಸ್ಸು ಆಗುತ್ತಿಲ್ಲ. ಖಾಸಗಿ ವೈದ್ಯರನ್ನು ನಿಯಂತ್ರಿಸಲು ಈಗ ಸಾಕಷ್ಟು ಕಾನೂನುಗಳಿವೆ. ಆ ಯಾವ ಕಾನೂನುಗಳೂ ಜಾರಿಗೆ ಬಂದಿಲ್ಲ. ಆ ಕಾನೂನುಗಳನ್ನು ಬಳಸಿಕೊಂಡು ವೈದ್ಯರಿಂದ ಸೇವೆ ಪಡೆಯುವ ಜಾಗೃತಿ ಜನರಲ್ಲಿ ಉಂಟಾಗಿಲ್ಲ. ಹೀಗಾಗಿ ನೀವು ಇನ್ನೊಂದು ಹೊಸ ಕಾನೂನು ತಂದರೂ ಅದರ ಹೆಚ್ಚಿನ ಉಪಯೋಗ ಆಗುವುದಿಲ್ಲ ಎಂಬ ವಾದದಲ್ಲೂ ಹುರುಳಿಲ್ಲದಿಲ್ಲ.

ಸಮಾಜವಾದಿ ಸೋವಿಯತ್ ರಶ್ಯವಿದ್ದಾಗ, ಅಲ್ಲಿ ಎಲ್ಲ ರೋಗಿಗಳಿಗೂ ಉಚಿತ ಚಿಕಿತ್ಸೆಯಿತ್ತು. ಹೃದಯ ಶಸ್ತ್ರಚಿಕಿತ್ಸೆಗೂ ರೋಗಿಗಳು ಶುಲ್ಕ ಕಟ್ಟಬೇಕಿರಲಿಲ್ಲ. ಈಗ ಸಮಾಜವಾದ ಉಳಿದು ಕೊಂಡಿರುವ ಕ್ಯೂಬಾದಲ್ಲಿ ಅತ್ಯಂತ ಕಡಿಮೆ ದರದಲ್ಲಿ ನಾನಾ ಕಾಯಿಲೆಗಳನ್ನು ಗುಣಪಡಿಸುವ ಆಸ್ಪತ್ರೆಗಳಿವೆ. ಕೇವಲ 10 ಸಾವಿರ ರೂಪಾಯಿಯಲ್ಲಿ ಅಲ್ಲಿ ಹೃದಯ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ. ಅಂತಲೇ ಕ್ಯೂಬಾದ ಕಡು ವೈರಿಯಾದ ಅಮೆರಿಕದ ಪ್ರಜೆಗಳು ಕೂಡ ಕಾಯಿಲೆ ಉಲ್ಬಣಿಸಿದರೆ, ಕ್ಯೂಬಾಗೆ ಧಾವಿಸಿ ಬರುತ್ತಾರೆ. ವೈದ್ಯಕೀಯ ಎಂಬುದು ಅಲ್ಲಿ ಸೇವೆ ಆಗಿದೆ. ವ್ಯಾಪಾರವಾಗಿಲ್ಲ.

ಆದರೆ ನವ ಉದಾರವಾದಿ ಆರ್ಥಿಕ ನೀತಿ ಒಪ್ಪಿಕೊಂಡಿರುವ ಭಾರತದಲ್ಲಿ ವೈದ್ಯಕೀಯ ಸೇವೆ ಎಂಬುದು ಹಣ ಗಳಿಸುವ ವ್ಯಾಪಾರವಾಗಿ ಮೂರು ದಶಕಗಳು ಕಳೆದಿವೆ. ಈ ವ್ಯವಸ್ಥೆ ತನ್ನ ಲೋಪವನ್ನು ಮುಚ್ಚಿಕೊಳ್ಳಲು ಎಷ್ಟೇ ಜನಪರ ಕಾನೂನುಗಳನ್ನು ತಂದರೂ ಹೆಚ್ಚಿನ ಪ್ರಯೋಜನ ಆಗುವುದಿಲ್ಲ. ಇದಕ್ಕೆ ಬದಲಾಗಿ, ಸಾರ್ವಜನಿಕ ಆರೋಗ್ಯ ಸೇವೆಯನ್ನು ಬಲಪಡಿಸಬೇಕಿದೆ. ಮುಂಚೆ ಶೇ.70ರಷ್ಟು ಜನರು ಸರಕಾರಿ ಆಸ್ಪತ್ರೆಯನ್ನು ಅವಲಂಬಿಸಿದ್ದರು. ಈಗ ತದ್ವಿರುದ್ಧವಾಗಿ ಶೇ.90ರಷ್ಟು ಜನ ಖಾಸಗಿ ಆಸ್ಪತ್ರೆಗಳ ಮೊರೆ ಹೋಗುತ್ತಿದ್ದಾರೆ. ಸರಕಾರಿ ಆಸ್ಪತ್ರೆಗೆ ಜನ ಬರುವುದಿಲ್ಲವೆಂದಲ್ಲ. ಈಗಲೂ ಯಾವುದೇ ಊರಿನ ಸರಕಾರಿ ಆಸ್ಪತ್ರೆಗೆ ಹೋದರೆ, ಆ ಆಸ್ಪತ್ರೆಗಳು ಜನರಿಂದ ತುಂಬಿ ತುಳುಕಿರುತ್ತವೆ.

ಆದರೆ ಅದಕ್ಕೆ ತಕ್ಕ ಸೌಕರ್ಯಗಳು ಅಲ್ಲಿಲ್ಲ. ಅನೇಕ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆಯಿದೆ. ಇನ್ನೂ ಅನೇಕ ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಸಂಬಳಕ್ಕಾಗಿ ಇಲ್ಲಿ ಕೆಲಸ ಮಾಡಿ, ಹೆಚ್ಚಿನ ಸಂಬಳಕ್ಕಾಗಿ ಕೆಲ ಹೊತ್ತು ಖಾಸಗಿ ಆಸ್ಪತ್ರೆಗಳಿಗೆ ಹೋಗಿ ದುಡಿಯುತ್ತಾರೆ. ಅನೇಕ ಸರಕಾರಿ ಆಸ್ಪತ್ರೆಗಳು ಆಧುನಿಕ ತಂತ್ರಜ್ಞಾನದ ಕೊರತೆಯಿಂದ ಬಳಲುತ್ತಿವೆ. ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಸಿಟಿ ಸ್ಕಾನ್ ಮತ್ತು ಡಯಾಲಿಸಿಸ್ ಸೌಲಭ್ಯಗಳನ್ನು ಡಿ.1ರೊಳಗೆ ಅಳವಡಿಸುವುದಾಗಿ ಆರೋಗ್ಯ ಸಚಿವರು ಹೇಳಿದ್ದಾರೆ. ಇದು ಸ್ವಾಗತಾರ್ಹ ಕ್ರಮ. ಸರಕಾರಿ ಆಸ್ಪತ್ರೆಗಳನ್ನು ಬಲಪಡಿಸಿ, ಖಾಸಗಿ ಆಸ್ಪತ್ರೆಗಳಿಗೆ, ಅನಿವಾರ್ಯವಾಗಿ ಹೋಗುವ ಜನರ ನೋವು ಮತ್ತು ಸಂಕಟಗಳಿಗೆ ಸ್ಪಂದಿಸಿದರೆ ಎಷ್ಟೋ ಪ್ರಯೋಜನವಾಗುತ್ತದೆ. ಇವತ್ತಿನ ನವ ಉದಾರವಾದಿ ಆರ್ಥಿಕ ನೀತಿಯನ್ನು ಇಟ್ಟುಕೊಂಡು ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಣಕ್ಕೆ ಒಳಪಡಿಸುವ ಸರಕಾರದ ಪ್ರಯತ್ನ ಸ್ವಾಗತಾರ್ಹವಾದರೂ ಸಮಸ್ಯೆಗೆ ಅದೊಂದೆ ಪರಿಹಾರವಲ್ಲ ಎಂಬುದನ್ನು ಮನಗಾಣಬೇಕಿದೆ

ಕೇವಲ ವೈದ್ಯರಷ್ಟೇ ಅಲ್ಲ…

ರಹಮತ ತರೀಕೆರೆ

ಪ್ರಜಾವಾಣಿ: ನಡೆದಷ್ಟೂ ನಾಡು :: ಸೆಪ್ಟೆಂಬರ್ 28, 2011 [ಇಲ್ಲಿದೆ] [ಇನ್ನೊಂದು]

ಒಮ್ಮೆ ಕಣ್ಣಿನ ದವಾಖಾನೆಯೊಂದಕ್ಕೆ ಹೋಗಿದ್ದೆ. ಅಲ್ಲಿ ರೋಗಿಗಳು, ತಮ್ಮ ಪಾಳಿ ಬರುವವರೆಗೆ ನೋಡಲೆಂದು ಪತ್ರಿಕೆಗಳನ್ನು ಹರಡಲಾಗಿತ್ತು. ಅವು ಬಹುತೇಕ ಮತೀಯ ನಂಜಿನ ಪತ್ರಿಕೆಗಳಾಗಿದ್ದವು.

ಸದರಿ ವೈದ್ಯರು ರೋಗಿಗಳ ಕಣ್ಬೇನೆಯನ್ನೇನೊ ದುರಸ್ತಿ ಮಾಡುತ್ತಿದ್ದಾರೆ. ಆದರೆ ಅವರ ಒಣಗಣ್ಣನ್ನೂ ಕುರುಡು ಮಾಡುವಂತಹ ಸಾಹಿತ್ಯ ಇಟ್ಟಿದ್ದಾರಲ್ಲಾ, ದೃಷ್ಟಿದೋಷ ಸರಿಪಡಿಸುವರ ದೃಷ್ಟಿಯೇ ದೋಷಪೂರಿತವಾಗಿದೆಯಲ್ಲಾ ಅನಿಸಿ, ವಿಷಾದ ಹುಟ್ಟಿತು.

ದೈಹಿಕ ನೋವನ್ನು ನಿವಾರಿಸಬಲ್ಲ ಮತ್ತು ಸಾವನ್ನು ಮುಂದೂಡಬಲ್ಲ ವೈದ್ಯರು, ಮಾನವೀಯವೂ ವೈಜ್ಞಾನಿಕವೂ ಆದ ವೈದ್ಯಶಾಸ್ತ್ರದ ಮನೋಧರ್ಮಕ್ಕೇ ಸಲ್ಲದ ಸಾಮಾಜಿಕ ಕಾಯಿಲೆಗಳಿಂದ ಪೀಡಿತರಾಗಿರುವುದು ಒಂದು ವೈರುಧ್ಯವೇ ಸರಿ. ಇದು, ಅವರು ಪದವಿ ಸ್ವೀಕಾರದ ಹೊತ್ತಲ್ಲಿ ಮಾಡಿದ ಪ್ರಮಾಣ ವಚನಕ್ಕೂ ವಿರುದ್ಧವಾದುದು.

ಜರ್ಮನಿಯಲ್ಲಿ ನಾಜಿಗಳ ಕ್ರೂರ ಪ್ರಯೋಗಗಳಿಗೆ ಉಪಕರಣವಾಗಿ ನೆರವಾದ ವೈದ್ಯರು ಇಲ್ಲಿ ನೆನಪಾಗುತ್ತಾರೆ. ಮಾನವರನ್ನು ಮತದ ಹೆಸರಲ್ಲಿ ವಿಭಜಿಸುವ ಸಿದ್ಧಾಂತಗಳಿಗೆ ಬಲಿಯಾಗುವ ಈ ಸಮಸ್ಯೆ, ವೈದ್ಯಕೀಯದಲ್ಲಿ ಮಾತ್ರವಲ್ಲ, ಅಧ್ಯಾಪನ, ವಕೀಲಿ ಮುಂತಾದ ಕ್ಷೇತ್ರಗಳಲ್ಲೂ ಬೇಕಾದಷ್ಟಿದೆ.

ಆದರೆ ನಮ್ಮಲ್ಲಿ ಇನ್ನೂ ಕೆಲವು ವೈದ್ಯರಿದ್ದಾರೆ. ಇವರು ದೈಹಿಕ ಬೇನೆಗಳಿಗೆ ಮಾತ್ರವಲ್ಲ, ಲೋಕದ ಬೇನೆಗಳಿಗೂ ಮದ್ದರೆಯುವ ಕೆಲಸದಲ್ಲಿ ತೊಡಗಿದವರು; ಇವರು ತಮ್ಮ ಸಾರ್ವಜನಿಕ ವ್ಯಕ್ತಿತ್ವದಿಂದಾಗಿ ಕೇವಲ ವೈದ್ಯರಲ್ಲದವರು. ಇಂತಹ ಕೆಲವರ ಸಹವಾಸದಿಂದ ನನಗೆ, ನಮ್ಮದಲ್ಲದ ಜ್ಞಾನಕ್ಷೇತ್ರದವರಿಂದ ಸಿಗುವ ಅನುಭವ ಮತ್ತು ಜ್ಞಾನದ ಪರಿ ಏನೆಂದು ಮನದಟ್ಟಾಗಿದೆ.

ಡಾ. ಅನುಪಮಾ, ಹೊನ್ನಾವರದ ಬಳಿಯ ಕವಲಕ್ಕಿಯಲ್ಲಿ ವೈದ್ಯರು. ತಮ್ಮ ಸಂಗಾತಿ ಡಾ. ಕೃಷ್ಣ ಅವರೊಡಗೂಡಿ, ಅನೇಕ ಸಾಹಿತ್ಯಕ ಕಾರ್ಯಕ್ರಮ ಏರ್ಪಡಿಸುವರು. ಇವಕ್ಕಿಂತ ಅವರ ಸಾಮಾಜಿಕ ಕಾರ್ಯಕ್ರಮಗಳೇ ಮಹತ್ವದವು.

ನಾನೊಮ್ಮೆ ಅತ್ತ ಹೋದಾಗ ಅನುಪಮಾ ಮನೆಗೆ ಹೋದೆ. ಅವರ ಗ್ರಂಥಾಲಯ ಕಂಡು ವಿಸ್ಮಯಗೊಂಡೆ. ಅವರು ಓದಿದ್ದ ಎಷ್ಟೋ ಆಂಗ್ಲ ಲೇಖಕರನ್ನು ನಾನು ಓದಿರಲಿಲ್ಲ. ಅವರು ನನಗೆ ವಿಲಿಯಂ ಡ್ಯಾಲ್ರಿಂಪಲನ `ವೈಟ್ ಮೊಗಲ್ಸ್` ಪುಸ್ತಕವನ್ನು ಕೊಡುಗೆಯಾಗಿ ಕೊಟ್ಟರು.

ಡ್ಯಾಲ್ರಿಂಪಲ್, ಆಳವಾದ ಸಂಶೋಧನೆ ಮಾಡಿ ಕಾದಂಬರಿಯಂತೆ ಬರೆಯಬಲ್ಲವನು. ಚರಿತ್ರಕಾರನಲ್ಲದ ಚರಿತ್ರಕಾರನಿವನು. ಅವನ ಈ ಕೃತಿಯಲ್ಲಿ, ಹೈದರಾಬಾದ್ ನಿಜಾಮರ ಆಸ್ಥಾನದಲ್ಲಿ ಈಸ್ಟ್ ಇಂಡಿಯಾ ಕಂಪನಿ ರೆಸಿಡೆಂಟ್ ಆಗಿದ್ದ ಜೇಮ್ಸ ಕಿರ್ಕ್‌ಪ್ಯಾಟ್ರಿಕ್ (1800), ಅಲ್ಲಿನ ಪ್ರಧಾನಿಯ ಮಗಳೂ ಪರಮ ಸುಂದರಿಯೂ ಆದ ಖೈರುನ್ನೀಸಾಳನ್ನು ಪ್ರೇಮಿಸಿ ಲಗ್ನವಾದ ಕಥೆಯಿದೆ.

ನಾನು ಕವಲಕ್ಕಿಯಲ್ಲಿರುತ್ತ ಆಸುಪಾಸಿನ ಜನರೊಂದಿಗೆ ಮಾತಾಡಿದೆ. ಅನುಪಮಾ ಜನಪ್ರೀತಿ ಗಳಿಸಿರುವ ತಾಯ್ತನದ ವೈದ್ಯೆಯೆಂದು ಅರಿವಾಯಿತು. ನಮ್ಮ ತರುಣ ವೈದ್ಯರು ಹಳ್ಳಿಗಳಿಗೆ ಹೋಗಲು ಹಿಂದೇಟು ಹಾಕುತ್ತಾರೆ; ನಗರದ ಹೈಟೆಕ್ ಆಸ್ಪತ್ರೆಗಳಲ್ಲಿರುವುದಕ್ಕೆ ಹಾತೊರೆಯುತ್ತಾರೆ.

ಆದರೆ ಅನುಪಮಾರ ಹಳ್ಳಿಯ ಆಸ್ಪತ್ರೆಗೆ ಬಂದಿದ್ದ ರೋಗಿಗಳನ್ನು ನೋಡುತ್ತ ನನಗೆ ಡಾ. ಬೆಸಗರಹಳ್ಳಿ ರಾಮಣ್ಣನವರ `ಗಾಂಧಿ` ಕತೆ ನನಗೆ ನೆನಪಾಯಿತು; ತೇಜಸ್ವಿಯವರ `ಡಾ.ಕುಬಿ ಮತ್ತು ಇಯಾಲ` ಕತೆ ಕೂಡ. ಕುಬಿಯಂತೆ ಮಾನವೀಯ ತಳಮಳವುಳ್ಳ ಅನುಪಮಾ, ಅನೇಕ ಇಯಾಲಗಳ ಕತೆಗಳನ್ನು ಬರೆದಿದ್ದಾರೆ.

ಅವುಗಳಲ್ಲಿ ಕೆಲವನ್ನು ಓದುತ್ತ ನಾನು ಜರ್ಝರಿತನಾಗಿದ್ದೇನೆ. ವೈದ್ಯರಿಗೆ ಮಾತ್ರ ಗೊತ್ತಾಗುವ ನಿಗೂಢ ಬೇನೆಗಳಿಂದ ನರಳಿದ ಜನರ ದಾರುಣ ಕತೆಗಳವು; ಜತೆಗೆ ನಮ್ಮ ಜನರ ವೇದನೆ, ಮುಗ್ಧತೆ, ಹಾಸ್ಯ ಮತ್ತು ಜೀವನಪ್ರೀತಿಗಳನ್ನು ಸ್ವಾರಸ್ಯಕರವಾಗಿ ಕಾಣಿಸುವ ಅನೇಕ ಬರೆಹಗಳನ್ನು ಅನುಪಮಾ ಮಾಡಿದ್ದಾರೆ.

ಧಾರವಾಡದ ಡಾ. ಸಂಜೀವ ಕುಲಕರ್ಣಿ, ತಮ್ಮ `ಒಂದು ಬೊಗಸೆ ಧ್ಯಾನ` ಪುಸ್ತಕದ ಮೂಲಕ ಗುರುತಾದವರು. ನಮ್ಮಿಬ್ಬರಿಗೂ ಚಾರಣ, ಸೂಫಿಸಂ ಸಂಗೀತ, ಬೌದ್ಧಧರ್ಮ- ಇತ್ಯಾದಿ ವಿಷಯಗಳಲ್ಲಿ ಸಮಾನ ಆಸಕ್ತಿಗಳಿವೆ. ಈ ಕಾರಣ, ನಮ್ಮ ಪರಿಚಯ ಸ್ನೇಹವಾಯಿತು.

ಒಮ್ಮೆ ನಾವಿಬ್ಬರೂ ಒಂದು ಪುಟ್ಟ ಗುಂಪು ಕಟ್ಟಿಕೊಂಡು ಕರ್ನಾಟಕದಲ್ಲಿ ಬೌದ್ಧಪ್ರವಾಸ ಮಾಡಿದ್ದುಂಟು. ನಾನು ಧಾರವಾಡಕ್ಕೆ ಹೋದರೆ, ಪ್ರತಿ ಮರಕ್ಕೂ ಅಲ್ಲಮ ಬುದ್ಧ ಸರ್ವಜ್ಞ ಇತ್ಯಾದಿ ಹೆಸರಿಟ್ಟು ಸಾಕಿರುವ ಆ ತೋಟಕ್ಕೆ ಹೋಗುತ್ತೇನೆ. ಈಚೆಗೆ ಅವರು ತೋಟದಲ್ಲಿ ಸೂಫಿಗಾಯಕ ಮುಕ್ತಿಯಾರ್ ಅಲಿಯವರ ಹಾಡಿಕೆ ಏರ್ಪಡಿಸಿದ್ದರು.

ಧಾರವಾಡದ ವಿಶ್ವವಿದ್ಯಾಲಯಕ್ಕೆ ಹತ್ತಿಕೊಂಡಿರುವ ಒಂದು ಕೊಳ್ಳದಲ್ಲಿ, ಅವರದೊಂದು `ಬಾಲಬಳಗ` ಎಂಬ ಅಪರೂಪದ ಶಾಲೆಯಿದೆ. `ಸಂತೋಷದ ಕಲಿಕೆಗೊಂದು ಪರಿಸರ ಮಿತ್ರಶಾಲೆ` ಎಂಬುದು ಅದರ ಉಪಹೆಸರು.

ಕಲಿಕೆಯನ್ನು ಆಟವಾಗಿಸಿರುವ ಶಾಲೆಯಲ್ಲದ ಶಾಲೆಯದು. ಅನೇಕ ಕಷ್ಟಗಳಲ್ಲಿ ಅವರದನ್ನು ನಡೆಸುತ್ತಿದ್ದಾರೆ. ತಮ್ಮ ಸೃಜನಶೀಲ ಪ್ರಯೋಗಗಳಿಗೆಲ್ಲ ಸಂಜೀವ್ ಹೇಗೆ ಸಮಯ ಹೊಂದಿಸಿಕೊಳ್ಳುವರೊ ತಿಳಿಯದು. ಬಹುಶಃ ಕೆಲಸ ಮಾಡುವವರಿಗೇ ಜಾಸ್ತಿ ಪುರುಸೊತ್ತೆಂದು ಕಾಣುತ್ತದೆ.

ಮೈಸೂರಲ್ಲಿ ವೈದ್ಯರಾಗಿರುವ ಡಾ.ವಿ.ಎನ್. ಲಕ್ಷ್ಮಿನಾರಾಯಣ, ಯಾವಾಗ ನನ್ನ ಗೆಳೆಯರಾದರೊ ನೆನಪಿಲ್ಲ. ಅವರ ಜತೆಯಿದ್ದಾಗ ನನ್ನ ಕಿವಿಗೆ ಬಿದ್ದಿರುವುದು ಎರಡೇ ಸಂಗತಿ. 1. ಅವರ ಸ್ವಚ್ಛಂದ ಅಟ್ಟಹಾಸದ ನಗು. 2. ಮಾರ್ಕ್ಸನ ಹೇಳಿಕೆಗಳು. ಮಾರ್ಕ್ಸನ ಹೇಳಿಕೆಗಳನ್ನವರು ಒಂದು ವರ್ಷ ಕಾಲ, ಸುಪ್ರಭಾತದ ಹಾಗೆ, ನನಗೆ ಎಸ್ಸೆಮ್ಸೆಸ್ ಹಾಕಿದ್ದುಂಟು. ಮೂಲತಃ ಚಳವಳಿಗಾರರಾದ ಅವರು, ವಿಜ್ಞಾನಿಯಾದ ತಮ್ಮ ಸಂಗಾತಿ ಡಾ. ರತಿಯವರ ಜತೆಗೂಡಿ, ಸಾಮಾನ್ಯ ಜನರು ದಮನಕ್ಕೆ ಒಳಗಾದ ಜಾಗಗಳಿಗೆ ಮುದ್ದಾಮಾಗಿ ಹೋಗುತ್ತಾರೆ.

ಅವರ ಜತೆಗೊಮ್ಮೆ ದಲಿತರ ಮನೆಗಳನ್ನು ಸುಡಲಾದ ಒಂದು ಊರಿಗೆ ಕಾರಣ ಶೋಧದ ತಂಡದಲ್ಲಿ ಹೋಗಿದ್ದೆ. ಬೀದಿ ಜನರ ಜತೆ ಸರಳವಾಗಿ ಬೆರೆಯುವ, ತಮ್ಮ ದೊಡ್ಡಗಂಟಲಿನ ನೇರ ಮಾತಿನ ಮೂಲಕ ಜನರ ಭಾವನೆಯನ್ನು ಅರಿಯುವ ಅವರ ಪರಿಯೇ ವಿಶಿಷ್ಟ.

ಆದರೆ ತನಗೆ ಸರಿಯೆನಿಸಿದ್ದನ್ನು ಜಾರಿಮಾಡುವ ಕೆಟ್ಟಹಟ ಅವರಲ್ಲಿರುವ ಒಂದು ಸಣ್ಣ ದೋಷ. ಒಮ್ಮೆ ಮೈಸೂರಲ್ಲಿ- ಬೇಡವೆಂದರೂ ಕೇಳದೆ- ಜಂಬೂಸವಾರಿ ದಿನವೇ ನಾಡಿನ ಸಮಸ್ಯೆಗಳನ್ನು ಚರ್ಚಿಸುವ ಕಾರ್ಯಕ್ರಮವನ್ನವರು ಏರ್ಪಡಿಸಿದ್ದರು-ಅದೂ ದಸರಾ ಮೆರವಣಿಗೆ ಬರುವ ರಸ್ತೆ ಪಕ್ಕದ ಸಭಾಂಗಣದಲ್ಲಿ.

ನಾವೆಲ್ಲ ಒಳಗೆ ಭಯಂಕರ ಗಂಭೀರತೆಯಲ್ಲಿ ಚರ್ಚೆ ಮಾಡುತ್ತಿದ್ದರೆ, ನಮ್ಮ ಮಾತು ನಮಗೇ ಕೇಳಿಸದಂತೆ ರಸ್ತೆಯಿಂದ ನಾಗಸ್ವರ ಡೋಲು ತಮ್ಮಟೆಯ ಸದ್ದು ಹಾಲಿನೊಳಗೆ ನುಗ್ಗಿ ಬರುತ್ತಿತ್ತು. ಅತ್ತ ದಸರೆಯನ್ನೂ ನೋಡಲಿಲ್ಲ; ಇತ್ತ ಭಾಷಣಗಳನ್ನೂ ಆಲಿಸಲಾಗಲಿಲ್ಲ.

ಇವರಂತೆಯೇ ರೈತಸಂಘದ ಡಾ. ವೆಂಕಟರೆಡ್ಡಿಯಿದ್ದಾರೆ. ದೊಡ್ಡಬಳ್ಳಾಪುರ ಸುತ್ತಮುತ್ತಲಿನ ಸಮಸ್ತ ಬಡವರ ವೈದ್ಯರವರು. ಅವರ ಶಾಪಿಗೆ ಜನ ಮುತ್ತಿಕೊಂಡಿರುತ್ತಾರೆ.

ಅವರಿಗೆ ಜನರ ಕಾಯಿಲೆಗಳಿಗಿಂತ, ಜನರ ಬಾಳಿನ ಸುಖದುಃಖಗಳ ಬಗ್ಗೆಯೇ ಹೆಚ್ಚು ಕಳವಳ. ಕೃಷಿ ವಿಶ್ವವಿದ್ಯಾಲಯವೊಂದರ ಹೊಲದಲ್ಲಿ ಸೂಕ್ತ ಅನುಮತಿಯಿಲ್ಲದೆ ಕುಲಾಂತರಿ ಬೆಳೆಯನ್ನು ಕಿತ್ತು ನಾಶಮಾಡುತ್ತ ಇರುವ ಅವಸ್ಥೆಯಲ್ಲಿ ಅವರನ್ನೊಮ್ಮೆ ನೋಡಿದೆ.

ಇದೇ ತರಹ, ಮಂಗಳೂರಿನ ಡಾ. ಶ್ರೀನಿವಾಸ ಕಕ್ಕಿಲ್ಲಾಯ ಇದ್ದಾರೆ; ಬೆಂಗಳೂರಿನ ಡಾ. ವಾಸು ಇದ್ದಾರೆ. ನಮ್ಮ ಸಮಾಜದ ಸಮಸ್ಯೆಗಳ ಬಗ್ಗೆ ಇವರಿಗಿರುವ ಆಳವಾದ ತಿಳಿವಳಿಕೆ, ಸ್ಪಷ್ಟತೆ ಮತ್ತು ಕಾಳಜಿ, ಕ್ರಿಯಾಶೀಲತೆ ವಿಶೇಷ ತರಹದ್ದಾಗಿದೆ. ಕರ್ನಾಟಕದ ತುಂಬ ಇಂತಹ ಎಷ್ಟೋ ವೈದ್ಯರು ಇರಬಹುದು.

ನನಗೆ ಇದಕ್ಕೂ ಭಿನ್ನ ಅನುಭವ ಸಿಕ್ಕಿದ್ದು ಪಶುವೈದ್ಯ ಗೆಳೆಯರಿಂದ. ಡಾ. ರಮಾನಂದರ `ವೈದ್ಯನ ಶಿಕಾರಿ` ಪುಸ್ತಕ ಓದಿ, ಅದರೊಳಗಿನ ನವಿರಾದ ವಿನೋದಲೇಪಿತ ಗದ್ಯಕ್ಕೂ ಅನುಭವದ ಪ್ರಖರತೆಗೂ ಮಾರುಹೋದವನು ನಾನು. ರಮಾನಂದರು ಹೈದರಾಬಾದ್ ಕರ್ನಾಟಕದ ಹಳ್ಳಿಗಳಲ್ಲಿ ಕೆಲಸ ಮಾಡುತ್ತ ಪಡೆದ ಅನುಭವಗಳನ್ನು ಅದ್ಭುತವಾಗಿ ಬರೆದಿದ್ದಾರೆ.

ಸಮಾಜ ವಿಜ್ಞಾನಿಯ ಕಾಣ್ಕೆಯಿರುವ, ಜನರ ಮೇಲೆ ಪ್ರೀತಿ ಮತ್ತು ಬದ್ಧತೆಯಿರುವ ವೈದ್ಯರು ಮಾತ್ರ ಹೀಗೆ ಬರೆಯಬಲ್ಲರು. ಅವರು ಮಾಡಿರುವ ನಾಡಿನ ಸುತ್ತಾಟ ಕಂಡರೆ ಹೊಟ್ಟೆಕಿಚ್ಚಾಗುತ್ತದೆ. ದೇವರು ಧರ್ಮಗಳ ಬಗ್ಗೆ ತಲೆಕೆಡಿಸಿಕೊಳ್ಳದೆ, ಉಸಿರಾಟ ಮಾಡುವ ಸಮಸ್ತ ಜೀವಿಗಳಲ್ಲಿ ಪ್ರೀತಿಯನ್ನೂ ಕರುಣೆಯನ್ನೂ ತೋರುವ ಜೀವನದರ್ಶನ, ಅವರ ಬರೆಹದಲ್ಲಿ ಸುಪ್ತವಾಗಿದೆ. ಇನ್ನೊಬ್ಬ ಮಿತ್ರರು ಡಾ. ಮಿರ್ಜಾ ಬಶೀರ್.

ಸಾವಿನಂಚಿನಲ್ಲಿರುವ ನಾಯೊಂದನ್ನು ಉಪಚರಿಸಲು ಹೋದ ವೈದ್ಯನೊಬ್ಬನ ಅನುಭವ ಕುರಿತ ಕತೆಯನ್ನು ಓದಿಯೇ ನಾನು ಇವರ ಗೆಳೆಯನಾದವನು. ಲಂಕೇಶ್ ತೇಜಸ್ವಿ ಕುವೆಂಪು ಅವರನ್ನು ಚೆನ್ನಾಗಿ ಓದಿಕೊಂಡಿರುವ ಬಶೀರರ ಜತೆ ಚರ್ಚಿಸುವುದೇ ಒಂದು ಚೇತೋಹಾರಿ ಅನುಭವ.

ಇವರಲ್ಲೆಲ್ಲ ಚಿಕ್ಕನಾಯ್ಕನಹಳ್ಳಿಯ ಡಾ. ರಘುಪತಿಯವರದು ದಂಗುಬಡಿಸುವ ವ್ಯಕ್ತಿತ್ವ. ಹಳ್ಳಿಗಳಲ್ಲಿ ತಿರುಗಾಡುತ್ತ, ರೈತರನ್ನೂ ಅವರ ದನ ಕುರಿ ಎಮ್ಮೆಗಳ ಸುಖದುಃಖ ನೋಡುತ್ತ, ಖಾಸಗಿ ಜೀವನವೊಂದು ತಮಗಿದೆ ಎಂಬುದನ್ನೇ ಮರೆತಂತೆ ಬದುಕಿರುವವರು ಅವರು.

ತಾಲೂಕಿನ ರೈತಾಪಿ ಜನರ ಸಮಸ್ಯೆಗಳನ್ನೆಲ್ಲ ಬಲ್ಲಂತಿರುವ ಅವರದು ತಾಯಿಜೀವ. ಸಂಜೀವ್ ಇರುವೆಯಂತೆ ಕೆಲಸ ಮಾಡುತ್ತಾರಾದರೆ, ರಘುಪತಿಗೆ ಬೆಲ್ಲಕ್ಕೆ ಇರುವೆ ಮುತ್ತಿಕೊಳ್ಳುವಂತೆ ಹಳ್ಳಿಯ ಜನ ಮುತ್ತಿಕೊಳ್ಳುತ್ತಾರೆ. ಬಾಯಿಲ್ಲದ ಜೀವಗಳಿಗೆ ಉಪಚರಿಸುತ್ತ ಅವರು, ಬಾಯಿಲ್ಲದ ಸಮುದಾಯಗಳ ದುಗುಡಕ್ಕೂ ಮಿಡಿವ ಮನಸ್ಸನ್ನು ಪಡಕೊಂಡಂತಿದೆ.

ವಿಶೇಷವೆಂದರೆ, ಕುರಿಸಾಕಣೆ ಮತ್ತು ಕಂಬಳಿ ನೇಕಾರಿಕೆ ಬಗ್ಗೆ ಅವರು ಮಾಡಿರುವ ಸಂಶೋಧನೆ ಮತ್ತು ಬರವಣಿಗೆ. ಕರ್ನಾಟಕದಲ್ಲಿರುವ ಕಂಬಳಿ ನೇಯುವ ಜಾಗಗಳಿಗೆ ಹೋಗಬೇಕೆಂಬುದು ನಾವಿಬ್ಬರೂ ಹಾಕಿಕೊಂಡಿರುವ ಯೋಜನೆ, ಇನ್ನೂ ಈಡೇರಿಲ್ಲ.

ಇಲ್ಲಿನ ಬಹುತೇಕ ಮಿತ್ರರು, ತಮ್ಮ ವೃತ್ತಿ ತ್ಯಾಗಮಾಡಿ ಸಮಾಜ ಬದಲಾವಣೆಗೆ ಧುಮುಕಿದವರಲ್ಲ. ತಮ್ಮ ವೃತ್ತಿಯ ಜತೆಗೇ ಸಾಮಾಜಿಕ ಹೊಣೆಗಾರಿಕೆ ರೂಢಿಸಿಕೊಂಡವರು. ವಾರಾಂತ್ಯದಲ್ಲಿ ಸಾಮಾಜಿಕ ಕ್ರಿಯಾಶೀಲತೆ ಮಾಡುವ ವೈದ್ಯರಿಗೆ ಹೋಲಿಸಿದರೆ, ಇವರದು ನಿತ್ಯದ ಬೀದಿಯ ಸಾಮಾಜಿಕತೆ.

ಈ ಕಾರಣಕ್ಕೆ, ಭೂಭಾರ ಹೊತ್ತವರಂತೆ ಇವರ ಮುಖ ಬಿಗಿಗೊಂಡಿಲ್ಲ. ಇವರು `ನಗೀಕ್ಯಾದಿಗಿ ಮುಡಿದು` ಬದುಕನ್ನು ಲೀಲೆಯಂತೆ ತೆಗೆದುಕೊಂಡವರು. ಇವರ ಬದ್ಧತೆ ವಿನೋದವನ್ನು ಕಸಿದಿಲ್ಲ. ವೃತ್ತಿನಿಷ್ಠೆ, ಸಾಮಾಜಿಕ ಬದ್ಧತೆ, ಜೀವನಪ್ರೀತಿ ಇವರಿಗೆ ಭಿನ್ನ ಜಗತ್ತುಗಳೇ ಅಲ್ಲ.

ವೈದ್ಯವೃತ್ತಿಯಲ್ಲಿದ್ದು ತಮ್ಮ ಮಿತಿಗಳಲ್ಲೇ ವ್ಯಕ್ತಿತ್ವಕ್ಕೊಂದು ಹೊಸ ವಿಸ್ತರಣೆ ಕೊಟ್ಟಿರುವ ಈ ಗೆಳೆಯರ, ಸಾಮಾಜಿಕ ಕ್ರಿಯಾಶೀಲತೆ, ಅವರ ವೃತ್ತಿಗೆ ಹೊಸ ಮಾನವೀಯತೆಯನ್ನೂ ಅವರ ಜ್ಞಾನಕ್ಕೆ ದಾರ್ಶನಿಕತೆಯೂ ಒದಗಿಸಿದೆ; ಅವರ ವೃತ್ತಿಜ್ಞಾನದಿಂದ ಅವರ ಸಾಮಾಜಿಕ ತಿಳಿವಳಿಕೆಗೂ ಹೊಸಮೊಗ ದಕ್ಕಿದೆ.

ಸಾರ್ವಜನಿಕ ಬದುಕು ಮತ್ತು ಸುತ್ತಾಟಗಳು, ದಾರ್ಶನಿಕರಿಗೂ ಹೊಸ ಅನುಭವ ಹೊಸ ಕಾಣ್ಕೆ ಕೊಡಬಲ್ಲದು. ಸಾಸಿವೆ ಪ್ರಕರಣದ ಮೂಲಕ ತಾಯೊಬ್ಬಳ ನೋವಿಗೆ ಮದ್ದುಕೊಟ್ಟ ಬುದ್ಧ ದಾರ್ಶನಿಕ ಮಾತ್ರವಲ್ಲ, ಲೋಕದ ವೈದ್ಯ ಕೂಡ. ಒಮ್ಮೆ ನಮ್ಮ ಅತ್ಯುತ್ತಮ ಮೇಷ್ಟರನ್ನು ನೆನಪಿಸಿಕೊಳ್ಳಿ.

ಅವರಲ್ಲಿ ಬಹುತೇಕರು ತಮ್ಮ ಜ್ಞಾನಶಿಸ್ತಿನ ಪರಿಧಿಯನ್ನು ಉಲ್ಲಂಘಿಸಿ ಕಲಿತಿದ್ದವರು ಎಂದು ಹೊಳೆಯುತ್ತದೆ. ಬರೆಹಗಾರರು ಪತ್ರಕರ್ತರಾದರೆ ಅವರ ಬರೆಹಕ್ಕೆ ಹೊಸ ಆಯಾಮ ಬರುವುದನ್ನು ಲಂಕೇಶರಲ್ಲಿ ನಾವು ಕಂಡಿದ್ದೇವೆ.

ಸಾಹಿತ್ಯಕ ಸಂವೇದನೆಯುಳ್ಳವರ ವಿಜ್ಞಾನದ ತಿಳಿವಳಿಕೆಗೆ ಅಥವಾ ವಿಜ್ಞಾನದ ತಿಳಿವಳಿಕೆ ಉಳ್ಳವರ ಸಾಹಿತ್ಯದ ಸಂವೇದನೆಗೆ ವಿಶಿಷ್ಟತೆ ಇರುವುದನ್ನು ಸಹ ನೋಡಬಹುದು. ತೇಜಸ್ವಿಯವರ ಪರಿಸರ ಬರೆಹಗಳು ಅಥವಾ ಸಸ್ಯವಿಜ್ಞಾನಿ ಬಿಜಿಎಲ್ ಸ್ವಾಮಿಯವರ ಸಾಂಸ್ಕೃತಿಕ ಶೋಧಗಳು ಇಲ್ಲಿ ನೆನಪಾಗುತ್ತಿವೆ.

ಆದರೆ, ಯಾಕೊ ಏನೊ, ರಾಜಕಾರಣಿಗಳಾದ ವೈದ್ಯರನ್ನು ನೋಡುವಾಗ, ಅವರು ತಮ್ಮ ವೃತ್ತಿಜೀವನ ಮತ್ತು ಜ್ಞಾನಕ್ಷೇತ್ರಗಳ ಪ್ರೇರಣೆಯಿಂದ ಭಿನ್ನವಾದ ರಾಜಕಾರಣ ಮಾಡಿದ ನಿದರ್ಶನಗಳೇ ಕಾಣುತ್ತಿಲ್ಲ.

ನಿಜ ಬದುಕಿನಲ್ಲಿ ಜ್ಞಾನವಾಗಲೀ ವೃತ್ತಿಯಾಗಲೀ, ಇತರ ವೃತ್ತಿ ಮತ್ತು ಜ್ಞಾನಶಾಖೆಗಳಿಂದ ಸಂಬಂಧ ಕತ್ತರಿಸಿಕೊಂಡ ವಿಭಜಿತ ಲೋಕಗಳಲ್ಲ. ಕೆಲಮಟ್ಟಿಗೆ ಅವು ಹಾಗೆ ಹೋಳಾಗಿದ್ದೇ ಆಧುನಿಕ ಕಾಲದಲ್ಲಿ ಮತ್ತು ಪಡುವಣದ ಕುರುಡು ನಕಲಿನಿಂದ.

ನಮ್ಮ ರೈತರು ಅವಸರ ಬಿದ್ದಾಗ ಕುಂಟೆ ನೇಗಿಲನ್ನು ಸರಿಪಡಿಸಿಕೊಳ್ಳುವ ಬಡಗಿಗಳಾಗುವುದು, ದನಗಳಿಗೆ ಕಾಯಿಲೆಗೆ ಔಷಧಿಕೊಡಬಲ್ಲ ವೈದ್ಯರೂ ಹೇಗೆ ಸಾಧ್ಯವಾಯಿತು? ಒಂದು ಕ್ಷೇತ್ರದ ಜ್ಞಾನ ಇನ್ನೊಂದರ ಸಹವಾಸದಲ್ಲಿ ಹೊಸಜನ್ಮ ಪಡೆಯಬಲ್ಲದು.

ಚೀನಾದಲ್ಲಿ ಮಾವೊ, ಉಚ್ಛವರ್ಗಗಳು ಅಧಿಕಾರಸ್ಥಾನ ಹಿಡಿದು ಸಾಮಾನ್ಯ ಜನರ ಹಿತರಕ್ಷಣೆಯನ್ನು ಕಡೆಗಣಿಸಿವೆ ಎಂದು ಭಾವಿಸಿ, ಕೆಲವು ವರ್ಷ ಕಾಲ ಶಾಲೆಗಳನ್ನು ಮುಚ್ಚಿಸಿ, ವೈದ್ಯರು ಅಧ್ಯಾಪಕರು ಬುದ್ಧಿಜೀವಿಗಳು ತಾವು ವಾಸಿಸುವ ನಗರಗಳನ್ನು ಬಿಟ್ಟು ಹೊಲಗದ್ದೆಗಳಲ್ಲಿ ಹಳ್ಳಿಯಲ್ಲಿದ್ದು ದುಡಿಯಬೇಕು ಮತ್ತು ರೈತರಿಂದ ಶ್ರಮದ ಪಾಠ ಕಲಿಯುವಂತೆ ಕಡ್ಡಾಯಗೊಳಿಸಿದನು.

ಇದರಿಂದ ನಗರವಾಸಿ ಅಧಿಕಾರಿಗಳು ವೈದ್ಯರು ಅಧ್ಯಾಪಕರು ಗ್ರಾಮಗಳಿಗೆ ಹೋಗಬೇಕಾಯಿತು. ಆದರೆ ಸದ್ದುದ್ದೇಶವುಳ್ಳ ಈ ವಿಶಿಷ್ಟ ಸಾಂಸ್ಕೃತಿಕ ಪ್ರಯೋಗವು, ಸೈನಿಕ ಬಲಾತ್ಕಾರದ ಜತೆಗೆ ನಡೆದ ಕಾರಣ, ದುಷ್ಟರಿಣಾಮಗಳಲ್ಲಿ ಕೊನೆಗಂಡಿತು.

ಗ್ರಾಮೀಣ ಪ್ರದೇಶದಲ್ಲಿ ಕಡ್ಡಾಯ ಸೇವೆಸಲ್ಲಿಸಬೇಕೆಂದು ಸರ್ಕಾರ ನಿರ್ಣಯ ಮಾಡಿದಾಗೆಲ್ಲ, ನಮ್ಮ ವೈದ್ಯ ವಿದ್ಯಾರ್ಥಿಗಳು ಬೀದಿಗೆ ಬಂದು ಪ್ರತಿಭಟಿಸುವುದನ್ನು ಇವತ್ತಿಗೂ ನೋಡಬಹುದು. ಬಲಾತ್ಕರಿಸಿದರೆ ದುಷ್ಪರಿಣಾಮ. ಅವರ ಆಯ್ಕೆಗೆ ಬಿಟ್ಟರೆ, ಪರಿಣಾಮವಿಲ್ಲ. ಜನರಿಗೆ ಬೇಕಾದ ಜ್ಞಾನ ಮತ್ತು ಸೇವೆಗಳು, ಅವರಿರುವ ಜಾಗದಲ್ಲಿ ದಕ್ಕುವುದಿಲ್ಲ.

ಅವಕ್ಕಾಗಿ ಅವರು ಅವಿದ್ದಲ್ಲಿಗೇ ಬರಬೇಕು, ದುಬಾರಿ ಬೆಲೆಯನ್ನೂ ತೆರಬೇಕು ಎನ್ನುವಂತೆ ಸನ್ನಿವೇಶ ಬದಲಾಗಿದೆ. ಬಹುಶಃ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳ ಜ್ಞಾನಕ್ಕೆ ಸಾಮಾಜಿಕ ಹೊಣೆಗಾರಿಕೆಯನ್ನು ಬೆರೆಸುವ ವ್ಯವಸ್ಥೆ ಶಿಕ್ಷಣದಲ್ಲಿ ಮತ್ತು ಬದುಕಿನಲ್ಲಿ ಇಲ್ಲದಿರುವುದರಿಂದ ಹೀಗೆಲ್ಲ ಆಗುತ್ತಿದೆಯೇ?

ಸಾಮಾಜಿಕ ಹೊಣೆಗಾರಿಕೆ ಮಾತಂತಿರಲಿ, ಕರ್ನಾಟಕದಲ್ಲಿ ವೈದ್ಯಕೀಯದವರು ಇಂಜಿನಿಯರಿಂಗ್ ಕಲಿಯುವವರು ನಮ್ಮ ಅತ್ಯುತ್ತಮ ಸಾಹಿತ್ಯವನ್ನೂ ಕಲಿಯಬೇಕೆಂದು ಒಂದು ಸಣ್ಣ ಪ್ರಯೋಗ ಮಾಡಲಾಯಿತು. ಅದು ಸಹ ಬಹಳ ಯಶಸ್ಸು ಕಾಣಲಿಲ್ಲ.

ನನ್ನ ವೈದ್ಯಮಿತ್ರರು ಸಾಮಾಜಿಕ ಪ್ರಜ್ಞೆಯುಳ್ಳವರಾಗಿರುವುದಕ್ಕೂ, ಅವರು ಸಾಹಿತ್ಯದ ಗಂಭೀರ ಓದುಗರೂ ಹಾಗೂ ಸ್ವತಃ ಲೇಖಕರೂ ಆಗಿರುವುದಕ್ಕೂ ಏನೋ ಸಂಬಂಧವಿದೆ. ಬಹುಶಃ ಸಾಹಿತ್ಯದ ಓದು ಮತ್ತು ಬರೆಹ ಅವರ ವ್ಯಕ್ತಿತ್ವಕ್ಕೊಂದು ಹೊಸ ಕೆಚ್ಚನ್ನು ಕೂಡಿಸಿದೆ. ಒಬ್ಬ ಒಳ್ಳೆಯ ಬರೆಹಗಾರನಿಗೂ ಒಳ್ಳೆಯ ವೈದ್ಯನಿಗೂ ವ್ಯತ್ಯಾಸವಿಲ್ಲ.

ಪ್ರಶ್ನೆಯೆಂದರೆ, ಹೊಸ ಅನುಭವಕ್ಕಾಗಿ ಹೊಸ ಅರಿವಿಗಾಗಿ, ನಮ್ಮ ವೃತ್ತಿಕ್ಷೇತ್ರದ ಪರಿಧಿಯಾಚೆ ಎಷ್ಟು ದೂರದವರೆಗೆ ಹೋಗಬಹುದು? ಈ ಸೀಮೋಲ್ಲಂಘನೆ ನಮ್ಮ ವೃತ್ತಿಗೆ ಮಾಡುವ ಅನ್ಯಾಯವಾಗುದಿಲ್ಲವೇ? ಇಲ್ಲಿಯೇ ಡಾ. ವಿನಾಯಕ ಸೇನರು ನೆನಪಾಗುತ್ತಾರೆ; ಡಾ. ಚೆಗೆವಾರ ನೆನಪಾಗುತ್ತಾನೆ.

ಸೇನರು ವೈದ್ಯಸೇವೆ ಸಲ್ಲಿಸುತ್ತಲೇ ಬುಡಕಟ್ಟು ಜನರ ಹೈರಾಣಗೊಂಡ ಬದುಕಿನ ಭಾಗವಾಗಿ ಹೋದವರು; ಕಾರ್ಪೋರೆಟಿಗರ ಹಿತಕ್ಕಾಗಿ ಕಾಡಿನ ಜನರ ಮೇಲೆ `ಪ್ರಭುತ್ವ` ಸೃಷ್ಟಿಸಿರುವ ನರಕವನ್ನು ಖಂಡಿಸುತ್ತ ತಾವೂ ಪಾಡುಪಟ್ಟವರು. ಆದರೆ `ಚೆ` ಹಿಡಿದ ಹಾದಿ ಇನ್ನೂ ಕಟುತರವಾಗಿತ್ತು.

ಭೀಕರ ತುಳಿತಕ್ಕೆ ಒಳಗಾಗಿದ್ದ ದಕ್ಷಿಣ ಅಮೆರಿಕ ದೇಶಗಳ ಆರ್ಥಿಕ ರಾಜಕೀಯ ಸಂಕಟಗಳ ನಿವಾರಣೆಗಾಗಿ, ಸಾಮ್ರೋಜ್ಯಶಾಹಿಯ ವಿರುದ್ಧ ಸೆಣಸಾಡುತ್ತ `ಚೆ` ತುಪಾಕಿ ಹಿಡಿದು ಹೋರಾಟಕ್ಕೆ ಧುಮುಕಿದವನು; ಅವನ ಚಾರಿತ್ರಿಕ ಒತ್ತಡಗಳೇ, ವೈದ್ಯವೃತ್ತಿಗಿಂತ ಕ್ರಾಂತಿಯ ಹಾದಿಯನ್ನು ಹಿಡಿಯುವಂತೆ ಮಾಡಿದವು.

ಮಹಾ ಜೀವನಪ್ರೀತಿಯಿದ್ದ ಆತ, ತನ್ನ ಅಸ್ತಮಾ ಕಾಯಿಲೆ ಲೆಕ್ಕಿಸದೆ, ಕಾಡುಮೇಡುಗಳಲ್ಲಿ ಅಲೆಯುತ್ತ ಸೆಣಸುತ್ತ, ಒಂದು ದಿನ ಹಗೆಗಳ ಕೈಗೆ ಸಿಕ್ಕು ಕೊಲ್ಲಲ್ಪಟ್ಟನು. ವೈದ್ಯನೊಬ್ಬ ಕ್ರಾಂತಿಕಾರಿಯಾಗಿ ಲೇಖಕನಾಗಿ ರೂಪಾಂತರ ಪಡೆದ `ಚೆ` ದು ಒಂದು ದಂತಕತೆ.

ಯಾವುದೇ ವೃತ್ತಿಸಂಬಂಧ ಜ್ಞಾನವು ಅತಿಯಾಗಿ ಸ್ಪೆಶಲೈಜೇಶನ್ ಪಡೆದರೆ, ಸ್ವಕೇಂದ್ರಿತವಾದರೆ, ಇನ್ನೊಂದರ ಸಂಗಕ್ಕೆ ಹಾತೊರೆದು ಬದಲಾಗದಿದ್ದರೆ, ಜನಪರ ಕ್ರಿಯಾಶೀಲತೆಯ ಜತೆಗಾರಿಕೆಗೆ ಪಡೆಯದೆ ಹೋದರೆ, ಬೇಗನೆ ಗೊಡ್ಡಾಗಿಬಿಡುತ್ತದೆ;

ಅದರಲ್ಲೂ ಜೀವಕರುಣೆ ಬೇಡುವ ವೈದ್ಯಕೀಯದಂತಹ ಕ್ಷೇತ್ರದಲ್ಲಿ ಈ ರೂಪಾಂತರ ಸಂಭವಿಸದಿದ್ದರೆ, ದೊಡ್ಡ ನಷ್ಟ. ದುರಂತವೆಂದರೆ, ನಮ್ಮ ಸಮಾಜದ ಕಾಯಿಲೆಗಳ ರೋಗಾಣುಗಳು ಅವರಿಗೆ ಸೋಂಕುತ್ತಿರುವುದು. ಔಷಧಿಯೇ ನಂಜಾದರೇ ಏನು ಮಾಡಬೇಕು?

ಬಹುಶಃ ಈ ದುರಂತದ ಕಾರಣ ಹುಡುಕಬೇಕಾದುದು ವ್ಯಕ್ತಿಗಳಲ್ಲಿ ಅಲ್ಲ; ಅವರನ್ನು ರೂಪಿಸುವ ಪರಿಸರದಲ್ಲಿ. ರೋಗಿಗಳ ರೋಗಪರಿಹಾರ ಆಗಬೇಕಾದ್ದು ಕೇವಲ ದೈಹಿಕ ನೆಲೆಯಲ್ಲಿ ಅಲ್ಲ. ವ್ಯವಸ್ಥೆಯ ನೆಲೆಯಲ್ಲಿ. ಕುವೆಂಪು ಅವರ `ಧನ್ವಂತರಿಯ ಚಿಕಿತ್ಸೆ` ಕತೆಯ ನಾಟಕೀಯವಾಗಿ ಈ ಸತ್ಯವನ್ನೇ ಹೀಳುವಂತಿದೆ.

ಅಲ್ಲಿ ಬರುವ ಧನ್ವಂತರಿ, ರೈತನ ರೋಗವನ್ನು ಕಾಣುವುದು ದೇಹದಲ್ಲಲ್ಲ; “ಎದೆಯ ಮೇಲಿರುವ ರಾಜ್ಯದ ಭಾರವನ್ನು ತೆಗೆದು ಹಾಕಿದರೆ, ಕಾಯಿಲೆ ಸರಿಹೋಗುತ್ತದೆ” ಎಂದು ಅವನು ನುಡಿಯುತ್ತಾನೆ. ಕಾರಣ, ಅಲ್ಲಿ ಅವನು ಕೇವಲ ವೈದ್ಯನಲ್ಲದ ವೈದ್ಯನು.

Be the first to comment

Leave a Reply

Your email address will not be published.


*